ಠಾಣೆ: ಮಹಾರಾಷ್ಟ್ರದಭಿವಂಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ಭಿವಂಡಿಯ ಹರಿಹಾರ್ ಕಾಂಪೌಂಡ್ನಲ್ಲಿ ಒಂದು ಅಂತಸ್ತಿನ ಕಟ್ಟಡದಲ್ಲಿದ್ದ ಆನ್ಲೈನ್ ಸರಕು ವಿತರಣಾ ಸಂಸ್ಥೆಯ ಗೋದಾಮು ಸೋಮವಾರ ಕುಸಿದಿತ್ತು. ಇದರಲ್ಲಿ 35 ವರ್ಷದ ಭದ್ರತಾ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದು, ಆರು ಮಂದಿಗೆ ಗಾಯಗಳಾಗಿವೆ.
ಈ ಸಂಬಂಧ ಗೋದಾಮಿನ ಮಾಲೀಕರಾದ ಸೂರ್ಯಕಾಂತ್ ಪಾಟೀಲ್, ರಾಮಚಂದ್ರ ಪಾಟೀಲ್ ಮತ್ತು ಮಹಾನಂದಾ ಪಾಟೀಲ್ ಸೇರಿದಂತೆ ಕಟ್ಟಡದ ವಿನ್ಯಾಸವನ್ನು ಮಾಡಿದ್ದ ಸಂಸ್ಥೆಯ ಒಬ್ಬ ಸಿಬ್ಬಂದಿಯ ವಿರುದ್ಧ ನಾರ್ಪೋಲಿ ಪೊಲೀಸರು ಮಂಗಳವಾರ ಎಫ್ಐಆರ್ ದಾಖಲಿಸಿದ್ದಾರೆ.
‘ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಪೊಲೀಸರು ಘಟನೆ ಸಂಬಂಧ ತನಿಖೆಯನ್ನು ನಡೆಸುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.