ಪಾಲ್ಘರ್: ಮೊಬೈಲ್ ನೆಟ್ವರ್ಕ್ಗಾಗಿ ಮರ ಹತ್ತಿದ 15 ವರ್ಷದ ಹುಡುಗನೊಬ್ಬ ಸಿಡಿಲಿನ ಬಡಿತಕ್ಕೆ ತುತ್ತಾಗಿ ಮೃತ ಪಟ್ಟ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಸಂಭವಿಸಿದೆ. ದುರ್ಘಟನಯಲ್ಲಿ ಮೂವರು ಅಪ್ರಾಪ್ತರು ಗಾಯಗೊಂಡಿದ್ದಾರೆ.
ಸೋಮವಾರ ಸಂಜೆ ಪಾಲ್ಘರ್ನ ದಹನು ತಾಲೂಕಿನ ಮಂಕಾರ್ಪದ ಎಂಬಲ್ಲಿ ನಾಲ್ವರು ಹುಡುಗರು ದನ ಮೇಯಿಸಲು ಬಯಲಿಗೆ ತೆರಳಿದ್ದಾಗ ದುರಂತ ನಡೆದಿದೆ ಎಂದು ತಹಸೀಲ್ದಾರ್ ರಾಹುಲ್ ಸಾರಾಂಗ್ ತಿಳಿಸಿದ್ದಾರೆ.
ಸೋಮವಾರ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದೆ. ಗುಡುಗು, ಮಳೆ ಜೋರಿದ್ದ ಸಂದರ್ಭ ಮಕ್ಕಳು ಮೊಬೈಲ್ ನೆಟ್ವರ್ಕ್ಗಾಗಿ ಮರ ಹತ್ತಿದ್ದಾರೆ. ಸಿಡಿಲು ಮರದ ಮೇಲೆ ಅಪ್ಪಳಿಸಿದ ಪರಿಣಾಮ ಓರ್ವ ಅಪ್ರಾಪ್ತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು ರವೀಂದ್ರ ಕೋರ್ಡ ಎಂದು ಗುರುತಿಸಲಾಗಿದೆ.
ಗಾಯಗೊಂಡ ಇತರ ಮೂವರು 14-16 ವಯಸ್ಸಿನವರಾಗಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಬಾಲಕನ ಶವವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.