ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಷನ್‌ 2022 ಗುರಿ: ರಥಯಾತ್ರೆ ಆರಂಭಿಸಿದ ಅಖಿಲೇಶ್‌

Last Updated 12 ಅಕ್ಟೋಬರ್ 2021, 13:56 IST
ಅಕ್ಷರ ಗಾತ್ರ

ಕಾನ್ಪುರ/ಮಥುರಾ (ಪಿಟಿಐ): ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ‘ಮಿಷನ್‌ 2022’ ಗುರಿ ಸಾಧನೆಗಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಇಲ್ಲಿ ‘ರಥಯಾತ್ರೆ’ ಆರಂಭಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಟು ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಈಗಾಗಲೇ ‘ರೈತರನ್ನು ಹತ್ತಿಕ್ಕಿದೆ’. ಮರಳಿ ಅಧಿಕಾರಕ್ಕೆ ಬಂದರೆ ‘ಸಂವಿಧಾನವನ್ನೂ ಹತ್ತಿಕ್ಕಲಿದೆ’ ಎಂದು ಹೇಳಿದರು.

ಉತ್ತರ ಪ್ರದೇಶದ ಕಾನ್ಪುರದಿಂದ ಅಖಿಲೇಶ್‌ ಯಾದವ್‌ ಆರಂಭಿಸಿದ ‘ಸಮಾಜವಾದಿ ವಿಜಯ್‌ ರಥಯಾತ್ರೆ’ಯು 403 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಚುನಾವಣೆಯ ಪೂರ್ವದಲ್ಲಿ ಸಂಚರಿಸಲಿದೆ.

ಯಾತ್ರೆಗೆ ಚಾಲನೆ ನೀಡುವ ಮುನ್ನ ಅಖಿಲೇಶ್‌ ತಮ್ಮ ತಂದೆ ಮುಲಾಯಂ ಸಿಂಗ್ ಆಶೀರ್ವಾದ ಪಡೆದರು. ನೋಟು ರದ್ದತಿ ಸಂದರ್ಭದಲ್ಲಿ ಬ್ಯಾಂಕ್‌ನ ಹೊರಗೆ ತಾಯಿ ಸಾಲಿನಲ್ಲಿ ನಿಂತಿದ್ದಾಗ ಜನಿಸಿದ್ದ ಬಾಲಕಿ ‘ಖಜಾಂಚಿ’ಯು ಯಾತ್ರೆಗೆ ಚಾಲನೆ ನೀಡಿದಳು. ಮರ್ಸಿಡಿಸ್‌ ಬಸ್‌ಗೆ ರಥದ ಸ್ವರೂಪವನ್ನು ನೀಡಲಾಗಿದೆ.

ಮುಲಾಯಂ ಸಿಂಗ್ ಅವರ ಚಿತ್ರದ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್, ಆಚಾರ್ಯ ನರೇಂದ್ರ ದೇವಾ, ರಾಮಮನೋಹರ ಲೋಹಿಯಾ, ಜಯಪ್ರಕಾಶ್‌ ನಾರಾಯಣ, ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ, ಪಕ್ಷದ ಹಿರಿಯ ನಾಯಕರಾದ ಜನೇಶ್ವರ ಮಿಶ್ರಾ, ಬಂಧನದಲ್ಲಿರುವ ಸಂಸದ ಅಜಂ ಖಾನ್‌ ಚಿತ್ರ ಹೊಂದಿದೆ.

ಯಾತ್ರೆಯು ಕಾನ್ಪುರ, ಕಾನ್ಪರ ದೆಹತ್‌, ಹಮಿರ್‌ಪುರ, ಜಲೌನ್‌ಗೆ ಮೊದಲ ಹಂತದಲ್ಲಿ ತೆರಳಲಿದ್ದು, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಹತ್ತಿಕ್ಕುವ ನೀತಿಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.

ಜನತೆ ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡಲಿದ್ದು, ಪೂರ್ಣ ಬಹುಮತದಿಂದ ಪಕ್ಷ ಸರ್ಕಾರ ರಚಿಸುವ ವಿಶ್ವಾಸವಿದೆ. ತಂದೆ ಮುಲಾಯಂ ಸಿಂಗ್ ಅವರೂ ಕಾನ್ಪುರದಿಂದ ರಥಯಾತ್ರೆ ಆರಂಭಿಸಿದ್ದರು. ತಾವು ಆ ಸಂಪ್ರದಾಯ ಮುಂದುವರಿಸುತ್ತಿರುವುದಾಗಿ ಹೇಳಿದರು.

ಇನ್ನೊಂದೆಡೆ, ಅಖಿಲೇಶ್‌ ಯಾದವ್‌ ಅವರ ಚಿಕ್ಕಪ್ಪ, ಪ್ರಗತಿಶೀಲ ಸಮಾಜವಾದಿ ಪಕ್ಷದ ಮುಖ್ಯಸ್ಥ ಶಿವಪಾಲ್‌ ಯಾದವ್‌ ಅವರು, ಮಥುರಾದಿಂದ ಸಾಮಾಜಿಕ ಪರಿವರ್ತನಾ ಯಾತ್ರೆಯನ್ನು ಸೋಮವಾರ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT