ಮುಂಬೈ: ಮುಂಬೈ ಮೆಟ್ರೊ ರೈಲು ನಿಗಮವು (ಎಂಎಂಆರ್ಸಿಎಲ್) ಆರೇ ಕಾಲೋನಿಯ ಸಾರಿಪುಟ್ ನಗರದಲ್ಲಿ, ಕೊಲಾಬಾ–ಬಾಂದ್ರಾ–ಸೀಪ್ಝಡ್ ನಡುವಿನ ಮೆಟ್ರೊಮೂರನೇ ಮಾರ್ಗದ ಪರೀಕ್ಷಾರ್ಥ ಸಂಚಾರವನ್ನು ಮಂಗಳವಾರ ಆರಂಭಿಸಿತು.
ಪರೀಕ್ಷಾರ್ಥ ಸಂಚಾರಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಫಡಣವೀಸ್, ‘ಮೆಟ್ರೋ ಮೂರನೇ ಮಾರ್ಗ ಯೋಜನೆಯು (ಕಾರ್ ಶೆಡ್) ಪರಿಸರದ ಕಾರಣಕ್ಕಿಂತ ಹೆಚ್ಚಾಗಿ ರಾಜಕೀಯದ ವಿರೋಧವನ್ನು ಎದುರಿಸುತ್ತಿದೆ’ ಎಂದರು.
ಈ ಯೋಜನೆಯು 33.5 ಕಿ.ಮಿ. ಉದ್ದದ ಸುರಂಗ ಮಾರ್ಗವನ್ನು ಹೊಂದಿದ್ದು, ದಕ್ಷಿಣ ಮುಂಬೈನಿಂದ ಪಶ್ಚಿಮದ ಉಪನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗವು ಉಪನಗರಗಳ ನಿವಾಸಿಗಳ ಸಂಚಾರ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.