ನವದೆಹಲಿ: ‘ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯು ವೈಯಕ್ತಿಕ ಸ್ಪರ್ಧೆಗಿಂತ ಮಹತ್ವದ್ದಾಗಿದ್ದು, ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಮುಂದಿಡುವ ಹೆಜ್ಜೆಯಾಗಿದೆ’ ಎಂದು ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಭಾನುವಾರ ತಿಳಿಸಿದ್ದಾರೆ.
ಪುತ್ರ ಹಾಗೂ ಬಿಜೆಪಿ ಸಂಸದ ಜಯಂತ ಸಿನ್ಹಾ ಬೆಂಬಲ ಲಭಿಸದಿರುವುದಕ್ಕೆ ಯಾವುದೇ ಧರ್ಮ ಸಂಕಟವಿಲ್ಲ. ಆತ ತನ್ನ ‘ರಾಜಧರ್ಮ’ವನ್ನು ಪಾಲಿಸುತ್ತಿದ್ದಾನೆ. ನಾನು ನನ್ನ ‘ರಾಷ್ಟ್ರಧರ್ಮ’ವನ್ನು ಪಾಲಿಸುತ್ತಿದ್ದೇನೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ಸರ್ಕಾರದ ಸರ್ವಾಧಿಕಾರಿ ನೀತಿಗಳನ್ನು ಪ್ರತಿರೋಧಿಸಬೇಕು ಎಂಬ ಸಂದೇಶವನ್ನು ಈ ಚುನಾವಣೆಯ ಮೂಲಕ ಭಾರತದ ಜನತೆಗೆ ನೀಡುತ್ತಿದ್ದೇವೆ’ ಎಂದಿದ್ದಾರೆ.
‘ಒಬ್ಬ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಆಯ್ಕೆ ಮಾಡುವುದರಿಂದ ಇಡೀ ಸಮುದಾಯದ ಉನ್ನತಿಯಾಗುವುದಿಲ್ಲ. ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿಸಿರುವುದು ಬಿಜೆಪಿಯ ರಾಜಕೀಯ ಸಂಕೇತವಷ್ಟೇ’ ಎಂದೂ ಹೇಳಿದ್ದಾರೆ.
ಇಡೀ ಸಮುದಾಯದ ಉನ್ನತಿಯು ಸರ್ಕಾರವು ಅನುಸರಿಸುವ ನೀತಿಗಳ ಮೇಲೆ ಅವಲಂಬಿತವಾಗಿದೆ ಎಂದೂಯಶವಂತ ಸಿನ್ಹಾ ಅವರು ಪ್ರತಿಪಾದಿಸಿದ್ದಾರೆ.
‘ಇಂದು ನಮ್ಮ ದೇಶದಲ್ಲಿ ರಾಜಕೀಯವು ಹಲವು ದೌರ್ಬಲ್ಯಗಳನ್ನು ಒಳಗೊಂಡಿದೆ. ಇದು ಜನರು ಬೀದಿಗಿಳಿಯುವಂತೆ ಮಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಹೀಗಾಗಬಾರದು’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.