ಬೆಂಗಳೂರು: ಮೈಸೂರಿನಲ್ಲಿ ಮಂಗಳವಾರ ರಾತ್ರಿ ನಡೆದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿರುವ ಹೇಳಿಕೆಯೊಂದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಕರ್ನಾಟಕ ಕಾಂಗ್ರೆಸ್ನ ಅಧಿಕೃತ ಟ್ವಿಟರ್ ಖಾತೆಯಿಂದ ಗುರುವಾರ ಟ್ವೀಟ್ ಮಾಡಲಾಗಿದೆ. ‘ಕಾಂಗ್ರೆಸ್ನವರು ನನ್ನನ್ನು ರೇಪ್ ಮಾಡುತ್ತಿದ್ದಾರೆ’ ಎಂಬ ಗೃಹಸಚಿವರ ಹೇಳಿಕೆ ಅವರ ಅಸಹಾಯಕತೆ, ಅದಕ್ಷತೆ, ಅಯೋಗ್ಯತನ ಹಾಗೂ ವೈಫಲ್ಯವನ್ನು ಒಪ್ಪಿಕೊಂಡಂತಿದೆ’ ಎಂದು ಟೀಕಿಸಲಾಗಿದೆ.
ಕಾಂಗ್ರೆಸ್ನವರು ನನ್ನನ್ನು ರೇಪ್ ಮಾಡುತ್ತಿದ್ದಾರೆ ಎಂಬ ಗೃಹಸಚಿವರ ಹೇಳಿಕೆ ಅವರ ಅಸಹಾಯಕತೆ, ಅದಕ್ಷತೆ, ಅಯೋಗ್ಯತನ ಹಾಗೂ ವೈಫಲ್ಯವನ್ನು ಒಪ್ಪಿಕೊಂಡಂತಿದೆ.
— Karnataka Congress (@INCKarnataka) August 26, 2021
ಮಂತ್ರಿ ಸ್ಥಾನ ಪಡೆಯಲು ಲಾಭಿ ನಡೆಸುವುದಷ್ಟೇ ಅಲ್ಲ ಸ್ವಾಮಿ, ಪಡೆದ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ಯೋಗ್ಯತೆಯೂ ಇರಬೇಕು.
ಅನರ್ಹರು ಅಳಲು ಬಂದರೆ ಹೀಗೆಯೇ ನಡೆದುಕೊಳ್ಳುತ್ತಾರೆ.
‘ಮಂತ್ರಿ ಸ್ಥಾನ ಪಡೆಯಲು ಲಾಭಿ ನಡೆಸುವುದಷ್ಟೇ ಅಲ್ಲ, ಪಡೆದ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ಯೋಗ್ಯತೆಯೂ ಇರಬೇಕು. ಅನರ್ಹರು ಆಳಲು ಬಂದರೆ ಹೀಗೆಯೇ ನಡೆದುಕೊಳ್ಳುತ್ತಾರೆ’ ಎಂದು ವ್ಯಂಗ್ಯವಾಡಲಾಗಿದೆ.
ಏನು ಹೇಳಿದ್ದಾರೆ ಗೃಹ ಸಚಿವರು?
ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ನೈತಿಕ ಹೊಣೆ ಹೊತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು. ಈ ಕುರಿತು ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವರು, ‘ ರೇಪ್ ಆಗಿರುವುದು ಅಲ್ಲಿ. ಆದರೆ, ಕಾಂಗ್ರೆಸ್ನವರು ನನ್ನ ಮೇಲೆ ರೇಪ್ ಮಾಡುತ್ತಿದ್ದಾರೆ. ಎಲ್ಲೋ ಏನೋ ನಡೆಯುತ್ತದೆ. ಅದನ್ನು ಮಾನವೀಯ ನೆಲೆಯಲ್ಲಿ ಪರಿಶೀಲಿಸಿ, ತನಿಖೆ ನಡೆಸಿ ಎಂದು ಹೇಳುವುದನ್ನು ಬಿಟ್ಟು ರಾಜಕೀಯ ಮಾಡಿದರೆ ಅದನ್ನು ಜನ ತೀರ್ಮಾನ ಮಾಡುತ್ತಾರೆ. ಇಂಥ ಕೃತ್ಯಗಳನ್ನು ತಡೆಯಲು ಏನು ಮಾಡಬೇಕೋ ಅದನ್ನು ಪೊಲೀಸ್ ಇಲಾಖೆ ಮಾಡುತ್ತಿದೆ’ ಎಂದು ಅವರು ಹೇಳಿದ್ದಾರೆ.
‘ನಿರ್ಜನ ಪ್ರದೇಶದಲ್ಲಿ ರಾತ್ರಿ 7.30ರಲ್ಲಿ ಕೃತ್ಯ ನಡೆದಿದೆ. ಅಲ್ಲಿಗೆ ಅವರು ಹೋಗಬಾರದಿತ್ತು. ಆದರೆ, ಯಾರನ್ನೂ ನಾವು ತಡೆಯಲು ಸಾಧ್ಯವಿಲ್ಲ. ಗಸ್ತು ವ್ಯವಸ್ಥೆ ಇರಬೇಕಿತ್ತು. ಈ ಬಗ್ಗೆ ಇಂದು ಮೈಸೂರಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ,‘ ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.