ನವದೆಹಲಿ: ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವೆ ಪ್ರಾದೇಶಿಕ ಆಂಬುಲೆನ್ಸ್ ಆರಂಭಿಸುವ ಪ್ರಸ್ತಾವವನ್ನು ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟಿದ್ದಾರೆ.
‘ಕೋವಿಡ್–19 ನಿರ್ವಹಣೆ: ಅನುಭವ, ಉತ್ತಮ ಪದ್ಧತಿಗಳು ಮತ್ತು ಮುಂದಿನ ದಿಕ್ಸೂಚಿ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ನೆರೆಯ ಹತ್ತು ರಾಷ್ಟ್ರಗಳ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
‘ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಈ ಆಂಬುಲೆನ್ಸ್ ಸೇವೆಗಳನ್ನು ಬಳಸಿಕೊಳ್ಳಬಹುದು. ನಾಗರಿಕ ವಿಮಾನಯಾನ ಸಚಿವರು ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು‘ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
‘ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ವೈದ್ಯರು ಮತ್ತು ನರ್ಸ್ಗಳು ತಕ್ಷಣವೇ ಸಂಚರಿಸಲು ಅನುಕೂಲವಾಗುವಂತೆ ವಿಶೇಷ ವೀಸಾ ಯೋಜನೆ ಜಾರಿಗೊಳಿಸುವ ಅಗತ್ಯವಿದೆ’ ಎಂದು ಅವರುಹೇಳಿದ್ದಾರೆ.
‘21ನೇ ಶತಮಾನದಲ್ಲಿ ಏಷ್ಯಾ ಮುಂಚೂಣಿಯಲ್ಲಿರಬೇಕಾದರೆ ದಕ್ಷಿಣ ಏಷ್ಯಾ ರಾಷ್ಟ್ರಗಳು ಒಗ್ಗಟ್ಟಾಗಬೇಕು. ಕೋವಿಡ್–19 ಸಂದರ್ಭದಲ್ಲಿ ಪ್ರಾದೇಶಿಕ ಏಕತೆ ಸಾಧಿಸಬಹುದು ಎನ್ನುವುದನ್ನು ಈ ರಾಷ್ಟ್ರಗಳು ತೋರಿಸಿವೆ. ಹೀಗಾಗಿ, ಒಗ್ಗಟ್ಟು ಸಾಧ್ಯವಿದೆ’ ಎಂದು ವರ್ಚುವಲ್ ಭಾಷಣದಲ್ಲಿ ಮೋದಿ ಹೇಳಿದರು.