ಜೈಸಲ್ಮೇರ್: ‘ಒಂದು ತಿಂಗಳಿನಿಂದ ಐಷಾರಾಮಿ ಹೋಟೆಲ್ನಲ್ಲಿ ತಂಗಿರುವ ಶಾಸಕರ ಅಸಮಾಧಾನ ಸಹಜ. ಆದರೆ, ಪ್ರಜಾಪ್ರಭುತ್ವವನ್ನು ಉಳಿಸಲು ಶಾಸಕರು ಇದನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ’ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.
ಜೋಧಪುರದಿಂದ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ಅಸಮಾಧಾನ ಮರೆತು, ಕ್ಷಮಿಸಿ ಮುಂದುವರಿಯಬೇಕು.ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಪ್ರಜಾಪ್ರಭುತ್ವವನ್ನು ಉಳಿಸಲು ನಮ್ಮ ಶಾಸಕರು ನೀಡುತ್ತಿರುವ ಬೆಂಬಲವಿದು’ ಎಂದು ಹೇಳಿದರು.
‘ನೂರಕ್ಕೂ ಹೆಚ್ಚು ಶಾಸಕರು ಇಷ್ಟು ದೀರ್ಘಕಾಲ ಒಟ್ಟಿಗೆ ಇರುವುದು ದೊಡ್ಡ ಸಂಗತಿ. ದೇಶದ ಇತಿಹಾಸದಲ್ಲಿ ಈ ರೀತಿಯ ಘಟನೆ ನಡೆದಿಲ್ಲ. ಒಟ್ಟಿಗೆ ಇರುವುದರಿಂದ ಅವರ ನಡುವಿನ ಬಾಂಧವ್ಯವೂ ವೃದ್ಧಿಯಾಗಿದೆ’ ಎಂದರು.
‘ಪ್ರಜಾಪ್ರಭುತ್ವವನ್ನು ಉಳಿಸುವ ನಮ್ಮ ಹೋರಾಟವು ಮುಂದುವರಿಯುತ್ತದೆ ಏಕೆಂದರೆ ಜನಾದೇಶ ನಮಗೆ ಸಿಕ್ಕಿದೆ. ಜನರ ನಂಬಿಕೆಯನ್ನು ಉಳಿಸಿಕೊಂಡು, ಉತ್ತಮ ಆಡಳಿತವನ್ನು ನೀಡುವುದು ಮತ್ತು ಕೊರೊನಾ ಸೋಂಕಿನ ವಿರುದ್ಧ ಒಟ್ಟಾಗಿ ಹೋರಾಡುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಗೆಲುವು ರಾಜ್ಯದ ಜನರಿಗೆ ಸಲ್ಲುತ್ತದೆ’ ಎಂದಿದ್ದಾರೆ.