ನವದೆಹಲಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವರ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಗಂಭೀರ ಸ್ವರೂಪ ಮಾಡಿರುವುದರಿಂದ ಸ್ವತಂತ್ರ ಸಂಸ್ಥೆಯಿಂದ ತನಿಖೆ ಅಗತ್ಯ ಎಂದು ಸುಪ್ರಿಂ ಕೋರ್ಟ್ ಪೀಠ ಹೇಳಿದೆ.
ಹಿರಿಯ ಐಪಿಎಸ್ ಅಧಿಕಾರಿ ಪರಮ್ ವೀರ್ ಸಿಂಗ್ ಅವರು ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಮಾಡಿರುವ ಆರೋಪ ಕುರಿತಂತೆ ಈ ಹಿಂದೆ ಬಾಂಬೆ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಮತ್ತು ಅನಿಲ್ ದೇಶ್ಮುಖ್ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
‘ಇದು, ಕೇವಲ ಪ್ರಾಥಮಿಕ ತನಿಖೆಯಷ್ಟೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಹಿರಿಯ ಸಚಿವರೊಬ್ಬರ ವಿರುದ್ಧ ಆರೋಪ ಮಾಡಿರುವಾಗ ತನಿಖೆಯಲ್ಲಿ ತಪ್ಪೇನೂ ಇಲ್ಲ’ ಎಂದು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಹೇಮಂತ್ ಗುಪ್ತಾ ಅವರಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿತು.
ಪೂರಕವಾದ ಸಮರ್ಥನೆಗಳಿಲ್ಲದೇ ಕೇವಲ ಮೌಖಿಕವಾಗಿ ಆರೋಪಿಸಲಾಗಿದೆ. ಅಲ್ಲದೆ, ಕಕ್ಷಿದಾರರ ಅಭಿಪ್ರಾಯವನ್ನು ಆಲಿಸದೇ ಸಿಬಿಐ ತನಿಖೆಗೆ ಹೈಕೋರ್ಟ್ ಅದೇಶಿಸಿದೆ ಎಂದು ದೇಶ್ಮುಖ್ ಪರ ವಕೀಲ ಪ್ರತಿಪಾದಿಸಿದರು.
ಮಹಾರಾಷ್ಟ್ರ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಎ.ಎಂ.ಸಿಂಘ್ವಿ ಅವರು, ಮಹಾರಾಷ್ಟ್ರ ಸರ್ಕಾರ ಸಮ್ಮತಿಯನ್ನು ಹಿಂತೆಗೆದುಕೊಂಡಿದೆ. ಸಿಬಿಐ ತನಿಖೆಗೆ ಬಗ್ಗೆ ಬೇಸರವಿದೆ’ ಎಂದು ಹೇಳಿದರು.
ನ್ಯಾಯಪೀಠವು ಇದಕ್ಕೆ, ಪ್ರಕರಣದಲ್ಲಿ ಭಾಗಿಯಾಗಿರುವವರು ಗೃಹ ಸಚಿವ ಮತ್ತು ಪೊಲೀಸ್ ಕಮಿಷನರ್ ಆಗಿದ್ದು, ಪ್ರತ್ಯೇಕವಾಗುವವರೆಗೂ ಒಟ್ಟಾಗಿ ಕೆಲಸ ಮಾಡುತ್ತಿದ್ದರು ಎಂದು ಪ್ರತಿಕ್ರಿಯಿಸಿತು.