ನವದೆಹಲಿ: ‘ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗಳು ರೈತರನ್ನು ವಿವಿಧ ಸಂಕೋಲೆಗಳಿಂದ ಮುಕ್ತಗೊಳಿಸುವ ಜತೆಗೆ, ಅವರಿಗೆ ಹೊಸ ಹಕ್ಕುಗಳು ಮತ್ತು ಅವಕಾಶಗಳನ್ನು ತೆರೆದಿಡಲಿವೆ‘ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.
ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ವಿವಿಧ ಭಾಗಗಳ ರೈತರು ‘ದೆಹಲಿ ಚಲೋ‘ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಭಾನುವಾರ ತಮ್ಮ ಮಾಸಿಕ ಕಾರ್ಯಕ್ರಮ ‘ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮ‘ದಲ್ಲಿ ಕೃಷಿ ಕಾಯ್ದೆಗಳ ಕುರಿತು ಮಾತನಾಡಿದರು.
ಇತ್ತೀಚೆಗಿನ ಕೃಷಿ ಕಾಯ್ದೆಗಳು ಅಲ್ಪಾವಧಿಯಲ್ಲಿಯೇ ರೈತರ ತೊಂದರೆಗಳನ್ನು ತಗ್ಗಿಸಲು ಪ್ರಾರಂಭಿಸಿವೆ ಎಂದ ಪ್ರಧಾನಿಯವರು ಮಹಾರಾಷ್ಟ್ರದ ರೈತರೊಬ್ಬರು ಹೊಸ ಕಾಯ್ದೆಗಳಲ್ಲಿರುವ ನಿಬಂಧನೆಗಳನ್ನು ಬಳಸಿಕೊಂಡರು ವ್ಯಾಪಾರಿಯಿಂದ ತಮಗೆ ಬರಬೇಕಾದ ಹಣವನ್ನು ಪಡೆದುಕೊಂಡಿರುವ ಉದಾಹರಣೆಯನ್ನು ಉಲ್ಲೇಖಿಸಿದರು.
‘ಹಲವು ದಶಕಗಳಿಂದ ರೈತರು ಸರ್ಕಾರಗಳ ಎದುರು ಇಡುತ್ತಿದ್ದ ಬೇಡಿಕೆಗಳು ಅಥವಾ ರಾಜಕೀಯ ಪಕ್ಷಗಳು ರೈತರಿಗೆ ನೀಡುತ್ತಿದ್ದ ಭರವಸೆಗಳು ಈಗ ಈಡೇರಿವೆ. ಇತ್ತೀಚೆಗೆ ಸುಧೀರ್ಘ ಚರ್ಚೆಗಳ ನಂತರ ಸಂಸತ್ತು ಈ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ‘ ಎಂದು ಪ್ರಧಾನಿ ಹೇಳಿದರು.
‘ಈ ಹೊಸ ಕಾಯ್ದೆಗಳು ರೈತರನ್ನು ವಿವಿಧ ಸಂಕೋಲೆಗಳಿಂದ ಮುಕ್ತಗೊಳಿಸುವ ಜತೆಗೆ, ಅವರಿಗೆ ಹೊಸ ಹಕ್ಕುಗಳು ಮತ್ತು ಅವಕಾಶಗಳನ್ನೂ ನೀಡಿವೆ. ಈ ಸೌಲಭ್ಯಗಳು ಕಡಿಮೆ ಅವಧಿಯಲ್ಲಿ ರೈತರ ಸಮಸ್ಯೆಗಳನ್ನು ಕಡಿಮೆ ಮಾಡಲಿವೆ‘ ಎಂದು ಪ್ರತಿಪಾದಿಸಿದರು.