ನವದೆಹಲಿ: ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಹೊಸ ವಿವಾದಾತ್ಮಕ ಕೃಷಿ ಕಾನೂನನ್ನು ರದ್ದುಗೊಳಿಸುವಂತೆ ತೃಣಮೂಲ ಕಾಂಗ್ರೆಸ್ ಸೋಮವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು. ಅಲ್ಲದೆ ಅಡ್ಡದಾರಿ ಮೂಲಕ ಕಾನೂನು ಜಾರಿ ಅಥವಾ ತಿದ್ದುಪಡಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದೆ.
ಸಂಸತ್ತಿನ ಮಾನ್ಸೂನ್ ಅಧಿವೇಶನದ ಮೂಲಕ ಮೂರು ಕಾನೂನುಗಳನ್ನು ಅಂಗೀಕರಿಸಲಾಗಿದೆ ಮತ್ತು ಈ ಮಸೂದೆಗಳನ್ನು ಅಂಗೀಕರಿಸಿದ್ದನ್ನು ವಿರೋಧಿಸಿ ಅಮಾನತುಗೊಂಡ ಎಂಟು ರಾಜ್ಯಸಭಾ ಸಂಸದರಲ್ಲಿ ನಾನು ಕೂಡ ಇದ್ದೆ ಎಂದು ಟಿಎಂಸಿ ರಾಜ್ಯಸಭಾ ನಾಯಕ ಡೆರೆಕ್ ಒ ’ಬ್ರಿಯಾನ್ ಟೀಕಿಸಿದರು.
'ಕೃಷಿ ಕಾನೂನುಗಳ ಬಗ್ಗೆ ಟಿಎಂಸಿಯ ನಿಲುವು ಮತ್ತು ಭೂಮಿ ಮತ್ತು ರೈತರ ವಿಷಯದಲ್ಲಿ ಮಮತಾ ಬ್ಯಾನರ್ಜಿ ಅವರ ಬದ್ಧತೆ ನಿಮಗೆಲ್ಲರಿಗೂ ತಿಳಿದಿದೆ. ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಸರ್ಕಾರವು ಹೊಸ ಮಸೂದೆಯನ್ನು ಪರಿಚಯಿಸಬೇಕು ಮತ್ತು ಅದನ್ನು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕಾಯಿದೆಯನ್ನಾಗಿ ಮಾಡಬೇಕು. ಆದರೆ ಅಡ್ಡದಾರಿ ಮೂಲಕ ಕಾನೂನು ಜಾರಿ ಅಥವಾ ತಿದ್ದುಪಡಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ'ಎಂದಿದ್ದಾರೆ.
'ಮುಂಗಾರು ಅಧಿವೇಶನದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ಕೊಲ್ಲಲಾಯಿತು ಎಂಬುದನ್ನು ರಾಷ್ಟ್ರವು ನೋಡಿದೆ' ಎಂದು ಅವರು ಹೇಳಿದರು.
ಪಿಎಂ ಕಿಸಾನ್ ಯೋಜನೆಯ ಅನುಷ್ಠಾನವನ್ನು ಸ್ಥಗಿತಗೊಳಿಸುತ್ತಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಸರ್ಕಾರವನ್ನು ಬಿಜೆಪಿ ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿ,'ಕೃಷಿಕ್ ಬಂಧು ಅಡಿಯಲ್ಲಿ ಎಕರೆಗೆ ₹ 5,000 ನೀಡಿದರೆ, ಪಿಎಂ ಕಿಸಾನ್ ಅಡಿಯಲ್ಲಿ ಸರ್ಕಾರವು ಎಕರೆಗೆ ₹ 1,214 ನೀಡುತ್ತಿತ್ತು. ಕೃಷಿಕ್ ಬಂಧು ಯೋಜನೆಯು ಎಲ್ಲ ರೈತರನ್ನು ಒಳಗೊಳ್ಳುತ್ತದೆ. ಪಿಎಂ ಕಿಸಾನ್ ಯೋಜನೆಯಲ್ಲಿ 2 ಹೆಕ್ಟೇರ್ ಅಥವಾ ಅದಕ್ಕಿಂತ ಕಡಿಮೆ ಭೂಮಿಯನ್ನು ಹೊಂದಿರುವ ರೈತರಿಗೆ ಮಾತ್ರ ಅನುಕೂಲವಾಗಲಿದೆ' ಎಂದು ಅವರು ಹೇಳಿದರು.
'2021 ರಲ್ಲಿ ನಡೆಯುವುದು ದೊಡ್ಡ ಚುನಾವಣೆಯಲ್ಲ, 2024 ರಲ್ಲಿ ನಡೆಯಲಿದೆ. 2021ರಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಈಗಾಗಲೇ ಸೋತಿದೆ. 2024ರ ಚುನಾವಣೆಯ ಹೊತ್ತಿಗೆ, ಪ್ರತಿಪಕ್ಷಗಳು ಮತ್ತೊಮ್ಮೆ ನಮ್ಮ ಸಂಸ್ಥಾಪಕ ಪಿತಾಮಹರು 70 ವರ್ಷಗಳ ಹಿಂದೆ ರಚಿಸಿದ ಭಾರತದ ಸಂವಿಧಾನ ಮತ್ತು ಭಾರತದ ಕಲ್ಪನೆಗಾಗಿ ಹೋರಾಡಬೇಕಾಗುತ್ತದೆ' ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.