ನವದೆಹಲಿ: 'ರಾಜ್ಯ ಸರ್ಕಾರಕ್ಕೆ ರಾಜಕೀಯವಾಗಿ ತೊಂದರೆ ಉಂಟುಮಾಡುವ ಸಂಘಟನೆಗೆ ಸೇರಿದ ಯಾವುದೇ ವ್ಯಕ್ತಿಯನ್ನು ನಾನು ನೇಮಕ ಮಾಡಿರುವ ಒಂದು ನಿದರ್ಶನ ತೋರಿಸಿದರೆ ರಾಜೀನಾಮೆ ನೀಡಲು ಸಿದ್ಧ' ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.
ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ‘ನಾನು ಆರ್ಎಸ್ಎಸ್ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುತ್ತಿದ್ದೇನೆ ಎನ್ನುತ್ತಿದ್ದೀರಿ. ಆ ಸಂಘಟನೆಗೆ ಸೇರಿದ ಯಾರನ್ನಾದರೂ ನಾನು ವಿಶ್ವವಿದ್ಯಾಲಯಕ್ಕಾಗಲಿ, ಇತರೆಡೆಯಾಗಲಿ ನೇಮಕ ಮಾಡಿದ್ದರೆ ಆ ವ್ಯಕ್ತಿಯ ಹೆಸರು ಹೇಳಲಿ’ ಎಂದೂ ಸವಾಲು ಹಾಕಿದ್ದಾರೆ.
ಸರ್ಕಾರದ ಕಾರ್ಯಚಟುವಟಿಕೆಗಳು ಕಾನೂನಿನ ಪ್ರಕಾರ ನಡೆಯುತ್ತಿವೆಯೇ ಎಂಬುದನ್ನು ನೋಡುವುದು ನನ್ನ ಕೆಲಸ ಎಂದಿರುವ ಅವರು, ಸಾಂವಿಧಾನಿಕ ಹುದ್ದೆಯನ್ನು ರಾಜ್ಯಪಾಲರು ರಾಜಕೀಯ ಉದ್ದೇಶಕ್ಕೆ ಬಳಸುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಈಚೆಗೆ ಎಲ್ಡಿಎಫ್ ನೇತೃತ್ವದಲ್ಲಿ ರಾಜಭವನಕ್ಕೆ ಪ್ರತಿಭಟನಾ ಮೆರವಣಿಗೆ ನಡೆದಿತ್ತು.
‘ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರ ಕಚೇರಿಯನ್ನು ಕಣಕ್ಕಿಳಿಸಲಾಗಿದೆ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಈಚೆಗೆ ಆರೋಪಿಸಿದ್ದರು.