ಲಖನೌ: ಉತ್ತರ ಪ್ರದೇಶದ ಕಾನ್ಪುರದ ಸುಗಂಧ ದ್ರವ್ಯ ಉದ್ಯಮಿಯೊಬ್ಬರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ₹150 ಕೋಟಿಗೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಎಸ್ಟಿ ಗುಪ್ತಚರ ಘಟಕದ ಡಿಜಿ ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಎರಡು ವಾರ್ಡ್ರೋಬ್ಗಳಲ್ಲಿ ಎರಡು ಚಿಕ್ಕ ಗುಡ್ಡಗಳ ರೀತಿ ಹಣವನ್ನು ಜೋಡಿಸಿರುವುದು ಚಿತ್ರಗಳಲ್ಲಿ ಕಂಡುಬಂದಿದೆ. ನೋಟಿನ ಬಂಡಲ್ಗಳನ್ನು ಪ್ಲಾಸ್ಟಿಕ್ ಪೇಪರ್ನಲ್ಲಿ ಸುತ್ತಿ, ಹಳದಿ ಟೇಪ್ ಮೂಲಕ ಕಟ್ಟಿ ಇಡಲಾಗಿತ್ತು. ಅಂತಹ 30ಕ್ಕೂ ಹೆಚ್ಚು ದೊಡ್ಡ ದೊಡ್ಡ ಬಂಡಲ್ಗಳು ಚಿತ್ರದಲ್ಲಿ ಕಂಡುಬಂದಿವೆ.
ಮತ್ತೊಂದು ಚಿತ್ರದಲ್ಲಿ ಹಣವನ್ನು ಕೊಠಡಿಯ ಚಾಪೆ ಮೇಲೆ ಹರಡಿರುವ ಅಧಿಕಾರಿಗಳು 3 ಹಣ ಎಣಿಕೆ ಯಂತ್ರಗಳನ್ನು ಬಳಸಿ ಎಣಿಕೆ ಮಾಡುತ್ತಿರುವುದು ಕಂಡುಬಂದಿದೆ. ಎಎನ್ಐ ಟ್ವೀಟ್ ಮಾಡಿರುವ ವಿಡಿಯೊದಲ್ಲಿ ನೋಟಿನ ರಾಶಿ ಮತ್ತು ಎಣಿಕೆ ದೃಶ್ಯ ಕಾಣಬಹುದಾಗಿದೆ.
ದಾಳಿ ನಡೆದಿರುವ ಉದ್ಯಮಿ ಪಿಯೂಷ್ ಜೈನ್ ಅವರು,ಒಡೊಕೆಮ್ ಕೈಗಾರಿಕೆ ಹೊಂದಿದ್ದು, ಈ ಕಂಪನಿಯು ಸುಗಂಧ ದ್ರವ್ಯಕ್ಕೆ ಸಂಬಂಧಿಸಿದ ಉತ್ಪನ್ನವನ್ನು ಹಲವು ಕಂಪನಿಗಳಿಗೆ ಸರಬರಾಜು ಮಾಡುತ್ತದೆ.
ಕಾನ್ಪುರ ಮಾತ್ರವಲ್ಲದೆ, ಉದ್ಯಮಿಗೆ ಸಂಬಂಧಿಸಿದ ಮುಂಬೈ, ಗುಜರಾತ್ನ ಸ್ಥಳಗಳ ಮೇಲೂ ಐಟಿ ದಾಳಿ ನಡೆಸಿದೆ.
#WATCH | As per Central Board of Indirect Taxes and Customs chairman Vivek Johri, about Rs 150 crores have been seized in the raid, counting still underway.
ಪತ್ತೆಯಾದ ಹಣವು ನಕಲಿ ಸರಕು ಪಟ್ಟಿ ಬಳಸಿ ಉತ್ಪನ್ನವನ್ನು ಸರಬರಾಜು ಮಾಡಿದ್ದಕ್ಕೆ ಸಂಬಂಧಿಸಿದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಎಸ್ಟಿ ಪಾವತಿಸದೆ ಅಂತಹ 200 ನಕಲಿ ಸರಕು ಪಟ್ಟಿಯನ್ನು ಉದ್ಯಮಿ ನೀಡಿದ್ದಾರೆ. ಅವುಗಳ ಮೊತ್ತ ತಲಾ ₹ 50,000 ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.