ಅಟ್ಟಾರಿ, ಪಂಜಾಬ್(ಪಿಟಿಐ): ಕೋವಿಡ್ನಿಂದಾಗಿ ಗಡಿ ಮುಚ್ಚಿದ ಕಾರಣ ಭಾರತದಲ್ಲಿ ಸಿಲುಕಿಕೊಂಡಿದ್ದ 190 ಮಂದಿ ಪಾಕಿಸ್ತಾನದ ಪ್ರಜೆಗಳನ್ನು ಭಾನುವಾರ ಅಟ್ಟಾರಿ–ವಾಘಾ ಗಡಿಯ ಮೂಲಕ ತಾಯ್ನಾಡಿಗೆ ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂ ಮತ್ತು ಸಿಖ್ ಆರಾಧನಾಲಯಗಳಿಗೆ ಭೇಟಿ ನೀಡುವ ಸಲುವಾಗಿ ಇವರು ಭಾರತಕ್ಕೆ ಬಂದಿದ್ದರು.
ಪಾಕಿಸ್ತಾನದ ಪ್ರಜೆಗಳನ್ನು ಮರಳಿ ಕಳುಹಿಸುವ ಮೊದಲು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ವೈದ್ಯಕೀಯ ಪ್ರಮಾಣಪತ್ರಗಳನ್ನೂ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ಒಂದು ವರ್ಷದ ಬಳಿಕ ತಾಯ್ನಾಡಿಗೆ ಮರಳುತ್ತಿರುವುದು ಖುಷಿ ತಂದಿದೆ ಎಂದು ಪಾಕಿಸ್ತಾನದ ಪ್ರಜೆಗಳು ತಿಳಿಸಿದ್ದಾರೆ.
ಭಾರತ ಸರ್ಕಾರವು ಉಚಿತ ಊಟ, ವಸತಿ ಸೌಲಭ್ಯ ಕಲ್ಪಿಸಿದೆ. ಪ್ರಯಾಣದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ಕೂಡ ಸಹಕರಿಸಿದೆ ಎಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕಾಂಜಿ ರಾಮ್ ಎಂಬುವವರು ತಿಳಿಸಿದ್ದಾರೆ.