ನವದೆಹಲಿ (ಪಿಟಿಐ): ಬಿಪಿನ್ ರಾವತ್ ಮತ್ತು ಇತರ ಸೇನಾ ಸಿಬ್ಬಂದಿಗೆ ಸಂಸತ್ತಿನ ಒಳಗೆ ಅಂತಿಮ ಗೌರವ ಸಲ್ಲಿಸಲು ಧರಣಿ ನಿರತ ವಿರೋಧ ಪಕ್ಷದ ಸದಸ್ಯರಿಗೆ ಸರ್ಕಾರ ಅನುವು ಮಾಡಲಿಲ್ಲ.ಸರ್ಕಾರದ ಈ ನಡೆಯನ್ನು ವಿರೋಧ ಪಕ್ಷಗಳು ಖಂಡಿಸಿವೆ.
ರಾಜ್ಯಸಭೆಯ 12 ಸದಸ್ಯರನ್ನು ಅಮಾನತು ಮಾಡಿರುವುದನ್ನು ವಿರೋಧಿಸಿ ಧರಣಿ ನಡೆಸುತ್ತಿರುವ ವಿರೋಧ ಪಕ್ಷಗಳ ನಾಯಕರು, ರಾವತ್ ನಿಧನದ ಕಾರಣಕ್ಕೆ ಗುರುವಾರ ಧರಣಿಯನ್ನು ಹಿಂಪಡೆದಿದ್ದರು. ವಿಪಕ್ಷಗಳು ಮನವಿ ಮಾಡಿಕೊಂಡಿದ್ದರ ಹೊರತಾಗಿಯೂ ಅವರಿಗೆ ಅವಕಾಶ ನೀಡಲಾಗಿಲ್ಲ ಎನ್ನಲಾಗಿದೆ.
ಸರ್ಕಾರದ ನಡೆಯನ್ನು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಖಂಡಿಸಿದ್ದಾರೆ. ‘ತಮಿಳುನಾಡಿನಲ್ಲಿ ನಡೆದ ದುರಂತ ಹಿನ್ನೆಲೆಯಲ್ಲಿ ನಾವು ನಮ್ಮ ಧರಣಿಯನ್ನು ರದ್ದುಪಡಿಸಿದ್ದೆವು. ಸಂಸತ್ತಿನ ಒಳಗೆ ಬಂದು ಮೃತರಿಗೆ ಗೌರವ ಸೂಚಿಸಲು ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಕೇಳಿಕೊಂಡೆವು. ಆದರೆ ನಮ್ಮ ಮನವಿಯನ್ನು ತಿರಸ್ಕರಿಸಲಾಯಿತು. ಸರ್ಕಾರದ ಈ ನಡವಳಿಕೆಯನ್ನು ನಾವು ಖಂಡಿಸುತ್ತೇವೆ. ಇಲ್ಲಿ ಯಾವ ರೀತಿಯ ಪ್ರಜಾಪ್ರಭುತ್ವ ಇದೆ. ಸೇನೆಯ ಅತ್ಯುನ್ನತ ಅಧಿಕಾರಿಗೆ ಗೌರವ ಸೂಚಿಸಲು ನಾಯಕರಿಗೆ ಅವಕಾಶ ನೀಡದಿರುವಾಗ ಸಂಸತ್ತನ್ನು ಹೇಗೆ ನಡೆಸುತ್ತಾರೆ’ ಎಂದು ಹೇಳಿದ್ದಾರೆ.
‘ಸಂಸತ್ತು ಇರುವುದು ಕೇವಲ ಅವರ ಬಳಕೆಗಾಗಿ, ವಿರೋಧ ಪಕ್ಷಗಳಿಗಾಗಿ ಅಲ್ಲ ಎಂದು ಸರ್ಕಾರ ತಿಳಿದಂತಿದೆ. ಇದು ನೋವಿನ ಸಂಗತಿ’ ಎಂದು ಡಿಎಂಕೆ ಸಂಸದ ಟಿ.ಕೆ. ಇಳಂಗೋವನ್ ಹೇಳಿದ್ದಾರೆ.
‘ಸರ್ಕಾರ ದೊಡ್ಡ ತಪ್ಪನ್ನು ಮಾಡಿದೆ. ಇಂಥ ವಿಷಯಗಳಲ್ಲಿ ರಾಜಕೀಯ ಮಾಡಬೇಡಿ’ ಎಂದು ಆರ್ಜೆಡಿಯ ಸಂಸದ ಮನೋಜ್ ಝಾ ಹೇಳಿದ್ದಾರೆ.