ನವದೆಹಲಿ: ದ್ವಿದಳಧಾನ್ಯಗಳು, ಎಣ್ಣೆಕಾಳು, ಖಾದ್ಯತೈಲ, ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡುವ ‘ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆ’ಗೆ ಮಂಗಳವಾರ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆಯಿತು.
ಸೆ.15ರಂದು ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದ ಈ ಮಸೂದೆಗೆ ರಾಜ್ಯಸಭೆಯಲ್ಲಿ ಮಂಗಳವಾರ ಧ್ವನಿಮತದ ಅಂಗೀಕಾರ ದೊರೆಯಿತು.
ತಮ್ಮ ವ್ಯವಹಾರಗಳಲ್ಲಿ ಅತಿಯಾದ ನಿಯಂತ್ರಣ ಮತ್ತು ಹಸ್ತಕ್ಷೇಪವಾಗುತ್ತದೆ ಎಂಬಖಾಸಗಿ ಹೂಡಿಕೆದಾರರಲ್ಲಿನ ಭಯವನ್ನುಈ ಮಸೂದೆ ತೊಡೆದು ಹಾಕುವ ಉದ್ದೇಶವನ್ನು ಹೊಂದಿದೆ.
ಉತ್ಪಾದನೆ, ಸಂಗ್ರಹಣೆ, ಸಾಗಣೆ, ಹಂಚಿಕೆ ಮತ್ತು ವಿತರಣೆಯ ಸ್ವಾತಂತ್ರ್ಯವು ಆರ್ಥಿಕತೆಯನ್ನು ಉತ್ತೇಜಿಸುವ ಜತೆಗೆ, ಕೃಷಿ ಕ್ಷೇತ್ರದಲ್ಲಿ ಖಾಸಗಿ ಅಥವಾ ವಿದೇಶಿ ನೇರ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವುದಾಗಿ ಈ ಮೊದಲು ಸರ್ಕಾರ ಹೇಳಿತ್ತು.