ನವದೆಹಲಿ: ‘ಕೋವಿಡ್ 19‘ ಪಿಡುಗಿನಿಂದ ಅನಾಥವಾಗುವ ಮಕ್ಕಳು ಕಾನೂನು ಪ್ರಕಾರ ದತ್ತು ಪಡೆಯುವವರೆಗೂ, ಆ ಮಕ್ಕಳನ್ನು ‘ಕಳ್ಳಸಾಗಣೆ‘ಯಿಂದ ರಕ್ಷಿಸಬೇಕೆಂದು ಕೋರಿ ದೆಹಲಿ ಹೈಕೋರ್ಟ್ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೋಮವಾರ ನೋಟಿಸ್ ನೀಡಲಾಗಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ, ಈ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಆರೋಗ್ಯ ಸಚಿವಾಲಯ, ದೆಹಲಿ ಸರ್ಕಾರ ಮತ್ತು ನಗರ ಪೊಲೀಸರಿಂದ ಪ್ರತಿಕ್ರಿಯೆ ಕೇಳಿದೆ.
ವಕೀಲರಾದ ಜಿತೇಂದ್ರ ಗುಪ್ತಾ ಮತ್ತು ಆನಂದ್ ಅವರು ಈ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.
‘ಕೋವಿಡ್ ಬಿಕ್ಕಟ್ಟಿನಲ್ಲಿ ಅನಾಥವಾಗುವ ಮಕ್ಕಳಿಗೆ, ಅವರ ಹತ್ತಿರದ ಸಂಬಂಧಿಕರಿಂದ ಅಥವಾ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ರಕ್ಷಣೆ ನೀಡುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಗಳಲ್ಲಿ ಮನವಿ ಮಾಡಲಾಗಿದೆ.
ಮತ್ತೊಂದು ಅರ್ಜಿಯಲ್ಲಿ ‘ಆಮ್ಲಜನಕ ಮತ್ತು ಔಷಧ ಸಮಸ್ಯೆ, ಹಣಕಾಸು ಸಮಸ್ಯೆಯಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಿದ ಕಾರಣಗಳಿಂದ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ ಯಾವ ರೀತಿ ಆರ್ಥಿಕ ನೆರವು ನೀಡಲಾಗುತ್ತಿದೆ‘ ಎಂಬುದನ್ನು ತಿಳಿಸುವಂತೆ ಕೋರಲಾಗಿದೆ.