ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಂದು ರಾಷ್ಟ್ರ, ಒಂದೇ ಚುನಾವಣೆ’ ಚರ್ಚೆ ಅಗತ್ಯ: ಪ್ರಧಾನಿ ಸಲಹೆ

ಪ್ರಧಾನಿ ಸಲಹೆ * ರಾಷ್ಟ್ರೀಯ ಮತದಾರರ ದಿನದಂದು ಬಿಜೆಪಿ ಕಾರ್ಯಕರ್ತರ ಜೊತೆಗೆ ಸಂವಾದ
Last Updated 25 ಜನವರಿ 2022, 13:22 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಒಂದು ರಾಷ್ಟ್ರ, ಒಂದೇ ಚುನಾವಣೆ’ ಹಾಗೂ ‘ಒಂದೇ ಮತದಾರರ ಪಟ್ಟಿ’ ಕುರಿತಂತೆ ವಿಸ್ತೃತ ಚರ್ಚೆ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಪದೇ ಪದೇ ಚುನಾವಣೆ ನಡೆಯುವುದರ ಪರಿಣಾಮ ಎಲ್ಲದರ ಮೇಲೂ ಬೀರುತ್ತದೆ. ಅಭಿವೃದ್ಧಿಯೂ ನಲುಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ರಾಷ್ಟ್ರೀಯ ಮತದಾರರ ದಿನವಾದ ಮಂಗಳವಾರ ಅವರು ಬಿಜೆಪಿಯ, ವಿವಿಧ ರಾಜ್ಯಗಳ ಕಾರ್ಯಕರ್ತರ ಜೊತೆ ಸಂವಾದ ನಡೆಸಿದರು.

‘ಒಂದು ರಾಷ್ಟ್ರ, ಒಂದೇ ಚುನಾವಣೆ’, ‘ಒಂದೇ ಮತದಾರರ ಪಟ್ಟಿ’ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ ಅವರು, ಈ ಕುರಿತು ವಿವಿಧ ಹಂತದಲ್ಲಿ ಚರ್ಚೆಯಾಗಿ ಅಭಿಪ್ರಾಯಗಳು ಮೂಡಬೇಕಾಗಿದೆ ಎಂದು ಹೇಳಿದರು.

ನೀರಸ ಮತದಾನ, ಕಳವಳ:ಸುಶಿಕ್ಷಿತರು, ಸ್ಥಿತಿವಂತರು ಇರುವ ನಗರಗಳಲ್ಲಿಯೇ ಮತದಾನ ಪ್ರಮಾಣ ಕುಸಿಯುತ್ತಿದೆ. ಪ್ರಜ್ವಲಿಸುವ ಪ್ರಜಾಪ್ರಭುತ್ವ ಹೊಂದಿರುವ ಭಾರತದಲ್ಲಿನ ಈ ಪರಿಸ್ಥಿತಿ ಬದಲಾಗಬೇಕು ಎಂದೂ ಅಭಿಪ್ರಾಯಪಟ್ಟರು.

ನಗರವಾಸಿಗಳು ಜಾಲತಾಣಗಳಲ್ಲಿ ಚುನಾವಣೆ ಕುರಿತು ಸಾಕಷ್ಟು ಚರ್ಚಿಸಿದರೂ, ಮತಹಕ್ಕು ಚಲಾಯಿಸಲು ಮತಗಟ್ಟೆಗೆ ತೆರಳುವುದಿಲ್ಲ. ಮತದಾನ ಪ್ರಮಾಣ ಶೇ 75 ಆಗುವಂತೆ ಪಕ್ಷದ ಕೆಳಹಂತದ ಕಾರ್ಯಕರ್ತರು ಶ್ರಮಿಸಬೇಕು. ಮತದಾನವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಶ್ರೇಷ್ಠವಾದ ದಾನ. ಈ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗವು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿರುವುದೂ ಶ್ಲಾಘನೀಯ ಎಂದು ಹೇಳಿದರು.

ಪ್ರಥಮ ಲೋಕಸಭೆಗೆ 1951–52ರಲ್ಲಿ ನಡೆದ ಚುನಾವಣೆಯಲ್ಲಿ ಶೇ 45ರಷ್ಟು ಮತದಾನ ಆಗಿದ್ದರೆ, 2019ರಲ್ಲಿ ಅದು ಶೇ 67ಕ್ಕೆ ಏರಿದೆ. ಮಹಿಳಾ ಮತದಾರರ ಭಾಗವಹಿಸುವಿಕೆ ಹೆಚ್ಚಿರುವುದು ಉತ್ತಮ ಬೆಳವಣಿಗೆ. ಇದೇ ಸಂದರ್ಭದಲ್ಲಿ ನಾಗರಿಕರು, ರಾಜಕೀಯ ಪಕ್ಷಗಳ ಸದಸ್ಯರು ಕಡಿಮೆ ಮತದಾನ ಆಗುತ್ತಿರುವ ಕುರಿತೂ ಚಿಂತಿಸಬೇಕಿದೆ ಎಂದರು.

ಉತ್ತರಪ್ರದೇಶ, ಪಂಜಾಬ್‌, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭೆಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯುತ್ತಿದೆ. ಈ ಮೊದಲು ಗುಜರಾತ್‌ ರಾಜ್ಯದ ಕಾರ್ಯಕರ್ತರ ಜೊತೆಗಷ್ಟೇ ಸಂವಾದ ನಡೆಸುವ ಉದ್ದೇಶ ಇದ್ದಿತಾದರೂ, ಬಳಿಕ ದೇಶದ ವಿವಿಧೆಡೆಯ ಕಾರ್ಯಕರ್ತರನ್ನು ಸೇರ್ಪಡೆಗೊಳಿಸಲಾಯಿತು.

ಚುನಾವಣಾ ಆಯೋಗದ ಸ್ಥಾಪನಾ ದಿನವನ್ನು ‘ರಾಷ್ಟ್ರೀಯ ಮತದಾರರ ದಿನ’ವಾಗಿ ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT