ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಮತ್ತು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
ದೇವೇಗೌಡ ಅವರು ನಮ್ಮ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದಾರೆ. ಅವರಿಗೆ ಆಭಾರಿಯಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
'ಸದನದಲ್ಲಿ ಕೃಷಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ಎಚ್.ಡಿ. ದೇವೇಗೌಡಜೀ ಕೊಡುಗೆಯನ್ನು ನಾನು ಪ್ರಶಂಸಿಸುತ್ತೇನೆ. ಅವರ ಮಾತುಗಳು ಚರ್ಚೆಗೆ ಉತ್ತಮ ದೃಷ್ಟಿಕೋನವನ್ನು ನೀಡಿವೆ. ಅವರು ಸ್ವತಃ ಕೃಷಿ ಕ್ಷೇತ್ರದೊಂದಿಗೆ ಬಲವಾದ ಒಡನಾಟವನ್ನು ಹೊಂದಿದ್ದಾರೆ' ಎಂದು ಮೋದಿ ಹೇಳಿದ್ದಾರೆ.
ನಮ್ಮ ಪ್ರಜಾಪ್ರಭುತ್ವ ಪಾಶ್ಚಿಮಾತ್ಯ ಸಂಸ್ಥೆಯಲ್ಲ. ಇದು ಮಾನವ ಸಂಸ್ಥೆ. ಭಾರತದ ಇತಿಹಾಸವು ಪ್ರಜಾಪ್ರಭುತ್ವ ಸಂಸ್ಥೆಗಳ ಉದಾಹರಣೆಗಳಿಂದ ತುಂಬಿದೆ. ಪ್ರಾಚೀನ ಭಾರತದಲ್ಲಿ 81 ಪ್ರಜಾಪ್ರಭುತ್ವಗಳ ಉಲ್ಲೇಖವನ್ನು ನಾವು ಕಾಣುತ್ತೇವೆ. ಭಾರತದ ರಾಷ್ಟ್ರೀಯತೆಯ ಮೇಲಿನ ದಾಳಿಯ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡುವುದು ಇಂದು ಅತ್ಯಗತ್ಯ ಎಂದರು.
ಭಾರತ ಪ್ರಜಾಪ್ರಭುತ್ವದ ತಾಯಿ. ನಾವು ಈ ಪಾಠಗಳನ್ನು ಮುಂಬರುವ ಪೀಳಿಗೆಗೆ ಕಲಿಸಬೇಕಾಗಿದೆ. ಏಕೆಂದರೆ, ನಮ್ಮ ಪೂರ್ವಜರು ನಮಗೆ ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನು ರವಾನಿಸಿದ್ದಾರೆ. ನಾವು ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನು ರಕ್ಷಿಸಬೇಕಾಗಿದೆ ಎಂದು ಹೇಳಿದರು.