ಡೆಹ್ರಾಡೂನ್: ಚಳಿಗಾಲದ ನಿಮಿತ್ತ ಹಿಮಾಲಯದ ದೇವಾಲಯವನ್ನು ಮುಚ್ಚುವ ಒಂದು ದಿನ ಮುಂಚಿತವಾಗಿ ನ. 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥಕ್ಕೆ ಭೇಟಿ ನೀಡಲಿದ್ದು, ಸುಮಾರು ₹ 400 ಕೋಟಿಗೂ ಹೆಚ್ಚು ಮೊತ್ತದ ಕೇದಾರಪುರಿ ಪುನರ್ ನಿರ್ಮಾಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರಧಾನಿ ಅವರ ಭೇಟಿಯನ್ನು ದೃಢಪಡಿಸಿರುವ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, ‘ಹಿಮಾಲಯ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದರ ಜೊತೆಗೆ, ಮೋದಿ ಅವರು ಆದಿ ಗುರು ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.
ಒಂದು ತಿಂಗಳ ಅವಧಿಯಲ್ಲಿ ಮೋದಿ ಅವರು ಎರಡನೇ ಬಾರಿಗೆ ಕೇದಾರನಾಥಕ್ಕೆ ಭೇಟಿ ನೀಡುತ್ತಿದ್ದಾರೆ. ಅ. 7ರಂದು ಹೃಷಿಕೇಶದ ಏಮ್ಸ್ನಲ್ಲಿ ಆಮ್ಲಜನಕ ಘಟಕ ಉದ್ಘಾಟನೆಗಾಗಿ ಅವರು ಭೇಟಿ ನೀಡಿದ್ದರು. 2014ರಲ್ಲಿ ಪ್ರಧಾನಿಯಾದ ಬಳಿಕ ಮೋದಿ ಅವರು ಹಲವು ಬಾರಿ ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ. ಆದರೆ, ಕಳೆದ ವರ್ಷ ಕೋವಿಡ್ ನಿಮಿತ್ತ ಭೇಟಿ ನೀಡಿರಲಿಲ್ಲ.