ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ಬದಿ ವ್ಯಾಪಾರಿ ತಯಾರಿಸುವ ಆಹಾರ ಡೆಲಿವರಿಗೆ ಆನ್‌ಲೈನ್‌ ವೇದಿಕೆ

ಪಿಎಂ ಸ್ವಾನಿಧಿ ಫಲಾನುಭವಿಗಳೊಂದಿಗೆ ಸಂವಾದದ ವೇಳೆ ಪ್ರಧಾನಿ ಮೋದಿ ಹೇಳಿಕೆ
Last Updated 9 ಸೆಪ್ಟೆಂಬರ್ 2020, 10:29 IST
ಅಕ್ಷರ ಗಾತ್ರ

ಭೋಪಾಲ್‌: ದೊಡ್ಡ ರೆಸ್ಟೋರೆಂಟ್‌ಗಳಿಂದ ಆಹಾರವನ್ನು ಗ್ರಾಹಕರಿಗೆ ತಲುಪಿಸಲು ಚಾಲ್ತಿಯಲ್ಲಿರುವ ಆನ್‌ಲೈನ್ ಡೆಲಿವರಿ ವ್ಯವಸ್ಥೆಯಂಥ ವೇದಿಕೆಯೊಂದನ್ನು ಬೀದಿಬದಿ ಆಹಾರ ತಯಾರಿಸಿ, ಮಾರಾಟ ಮಾಡುವವರಿಗೂ ಕಲ್ಪಿಸುವ ಪ್ರಯತ್ನ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.

ಮಧ್ಯಪ್ರದೇಶದಲ್ಲಿರುವ, ಪ್ರಧಾನ ಮಂತ್ರಿ ಬೀದಿ ಬದಿ ಪ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವಾನಿಧಿ) ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸಿದ ಸಂವಾದದ ವೇಳೆ ಅವರು ಈ ವಿಷಯ ತಿಳಿಸಿದರು.

‘ಆನ್‌ಲೈನ್‌ ಡೆಲಿವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಬೀದಿಬದಿ ವ್ಯಾಪಾರಿಗಳು ಮುಂದೆ ಬರಬೇಕು. ಜೊತೆಗೆ, ಡಿಜಿಟಲ್‌ ಪಾವತಿಗೆ ಉತ್ತೇಜನ ನೀಡಬೇಕು. ಕೋವಿಡ್‌–19 ವ್ಯಾಪಕವಾಗುತ್ತಿರುವ ಈ ಸಂದರ್ಭದಲ್ಲಿ ತಂತ್ರಜ್ಞಾನ ಆಧರಿತ ಈ ಸೌಲಭ್ಯಗಳು ಹೆಚ್ಚು ಉಪಯುಕ್ತ’ ಎಂದೂ ಹೇಳಿದರು.

‘ಬ್ಯಾಂಕ್‌ ಹಾಗೂ ಹಣಕಾಸು ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಬೀದಿ ಬದಿ ವ್ಯಾಪಾರಿಗಳು ಇರುವ ಜಾಗಕ್ಕೆ ತೆರಳಿ, ಡಿಜಿಟಲ್‌ ಪಾವತಿಗೆ ಅಗತ್ಯವಿರುವ ಕ್ಯೂಆರ್‌ ಕೋಡ್‌ ನೀಡಿ, ಅದರ ಬಳಕೆ ಬಗ್ಗೆ ಮಾಹಿತಿಯನ್ನು ನೀಡುವರು’ ಎಂದರು.

ಕುಡಿಯುವ ನೀರು ಸಂಗ್ರಹಕ್ಕಾಗಿ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸುವ ಬದಲು ಗಡಿಗೆ, ಹೂಜಿಯಂತಹ ಮಣ್ಣಿನಿಂದ ಮಾಡಿದ ಪಾತ್ರೆಗಳನ್ನು ಬಳಸುವಂತೆಯೂ ಸಲಹೆ ನೀಡಿದರು.

ಇಂದೋರ್‌ ಜಿಲ್ಲೆಯ ಸಾಂವೇರ್‌ನ ಬೀದಿಬದಿ ವ್ಯಾಪಾರಿ ಛಗನ್‌ಲಾಲ್‌ ಮತ್ತು ಪತ್ನಿ, ಗ್ವಾಲಿಯರ್‌ನ ಅರ್ಚನಾ ಶರ್ಮಾ, ರೈಸೆನ್‌ ಜಿಲ್ಲೆಯ ತರಕಾರಿ ವ್ಯಾಪಾರಿ ದಲ್ಚಂದ್‌ ಅವರೊಡನೆ ಸಂವಾದ ನಡೆಸಿದರು.

ಪಿಎಂ ಸ್ವಾನಿಧಿ ಅನುಷ್ಠಾನದಲ್ಲಿ ಮಧ್ಯಪ್ರದೇಶ ಸರ್ಕಾರ ಉತ್ತಮ ಸಾಧನೆ ಮಾಡಿದೆ. ಎರಡು ತಿಂಗಳ ಅವಧಿಯಲ್ಲಿ ಲಕ್ಷಕ್ಕೂ ಅಧಿಕ ವ್ಯಾಪಾರಿಗಳು ಈ ಯೋಜನೆ ಲಾಭ ಪಡೆದಿದ್ದಾರೆ. 4.5 ಲಕ್ಷಕ್ಕೂ ಅಧಿಕ ಜನರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ ಎಂದೂ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT