ಮುಂಬೈ: ಅನಿರೀಕ್ಷಿತವಾದ ವಿದ್ಯುತ್ ವ್ಯತ್ಯಯದಿಂದವಾಣಿಜ್ಯ ನಗರಿ ಮುಂಬೈ ಸೋಮವಾರ ಭಾಗಶಃ ಸ್ತಬ್ಧವಾಗಿತ್ತು. ಹಲವೆಡೆ ಉಪನಗರ ರೈಲುಗಳು ಮಾರ್ಗ ಮಧ್ಯೆಯೇ ಸ್ಥಗಿತವಾದರೆ, ಲಿಫ್ಟ್ಗಳಲ್ಲಿ ಹಲವರು ಸಿಲುಕಿಕೊಂಡರು. ವಿದ್ಯುತ್ ಜೊತೆಗೆ ಅಂತರ್ಜಾಲ ಸೇವೆಯೂ ಸ್ಥಗಿತಗೊಂಡ ಕಾರಣ ಮನೆಯಿಂದಲೇ ಕಚೇರಿ ಕೆಲಸದಲ್ಲಿ ತೊಡಗಿದ್ದ ಸಾವಿರಾರು ಜನರು ವಿದ್ಯುತ್ ವ್ಯತ್ಯಯದಿಂದ ಸಮಸ್ಯೆ ಅನುಭವಿಸಿದರು.
ಕಲ್ವಾ, ಖಾರಾಘರ್, ಠಾಣೆ, ಪನ್ವೇಲ್, ಡೊಂಬಿವಲಿ, ಕಲ್ಯಾಣ್ ಸೇರಿದಂತೆ ಹಲವು ಉಪನಗರಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.ವಿದ್ಯುತ್ ಸರಬರಾಜು ಸ್ಥಗಿತಗೊಂಡ ಎರಡು ಗಂಟೆಗಳ ಬಳಿಕ, ಮಧ್ಯಾಹ್ನ 12 ಗಂಟೆಯ ವೇಳೆಗೆ ವಿದ್ಯುತ್ ಸರಬರಾಜನ್ನು ಯಥಾಸ್ಥಿತಿಗೆ ತರುವ ಕೆಲಸ ನಡೆಯಿತು. ಅಗತ್ಯ ಸೇವೆಗಳ ಉದ್ಯೋಗಿಗಳಾಗಿ ಉಪನಗರ ರೈಲು ಸೇವೆ ಆರಂಭಿಸಲಾಗಿದ್ದು, ವ್ಯತ್ಯಯದ ಬಳಿಕಅಂದಾಜು ಎರಡೂವರೆ ಗಂಟೆಗಳ ನಂತರ ರೈಲು ಸೇವೆ ಪುನರಾರಂಭವಾಯಿತು. ಈ ವ್ಯತ್ಯಯಕ್ಕೆ ಟಾಟಾ ಪವರ್ ಕಾರಣ ಎಂದು ಪಶ್ಚಿಮ ರೈಲ್ವೆ ಹಾಗೂ ಕೇಂದ್ರೀಯ ರೈಲ್ವೆ ತಿಳಿಸಿದೆ. 2018ರ ಜೂನ್ನಲ್ಲೂ ಇದೇ ರೀತಿ ಇಡೀ ಮಹಾನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
‘ಮಹಾರಾಷ್ಟ್ರ ರಾಜ್ಯ ವಿದ್ಯುತ್ ಸರಬರಾಜು ಕಂಪನಿ(ಎಂಎಸ್ಇಟಿಸಿಎಲ್) ಘಟಕದಲ್ಲಿ ನಿರ್ವಹಣೆ ಕೆಲಸದ ವೇಳೆ ಉಂಟಾದ ತಾಂತ್ರಿಕಸಮಸ್ಯೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇದೇ ಸಂದರ್ಭದಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ಸರಬರಾಜು ಮಾಡುವ ಟಾಟಾ ಪವರ್, ಬೆಳಗ್ಗೆ 10.10ರ ವೇಳೆಗೆ ಎಂಎಸ್ಇಟಿಸಿಎಲ್ ಸಬ್ಸ್ಟೇಷನ್ಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ್ದೂ ಸಮಸ್ಯೆ ಮತ್ತಷ್ಟು ಹೆಚ್ಚಲು ಕಾರಣವಾಯಿತು’ ಎಂದು ಮಹಾರಾಷ್ಟ್ರ ಇಂಧನ ಸಚಿವ ನಿತಿನ್ ರಾವುತ್ ತಿಳಿಸಿದರು.
ಸಮಸ್ಯೆಯ ನಡುವೆ ಹರಿದ ಹಾಸ್ಯ ಚಟಾಕಿಗಳು:ಸಮಸ್ಯೆ ನಡುವೆಯೂ ವಿದ್ಯುತ್ ವ್ಯತ್ಯಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯ ಚಟಾಕಿಗಳನ್ನು ನಿವಾಸಿಗಳು ಹಾರಿಸಿದ್ದಾರೆ. ‘ಪವರ್ ಇಲ್ಲದೇ ಮುಂಬೈನಲ್ಲಿ ಯಾವುದೇ ಕೆಲಸ ಆಗಲ್ಲ. ಜೊತೆಗೆ ವಿದ್ಯುತ್ ಕೂಡಾ ಇಲ್ಲ’ ಎಂದು ಹಾಸ್ಯ ನಟ ವೀರ್ ದಾಸ್ ಟ್ವೀಟ್ ಮಾಡಿದ್ದಾರೆ. ‘ಯಾಕೆ ಎಲ್ಲರೂ ಆಶ್ಚರ್ಯವಾಗಿದ್ದೀರಿ? ಇದು 2020’ ಎಂದು ನಟ ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.