ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | 72ನೇ ಗಣರಾಜ್ಯೋತ್ಸವ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

Last Updated 25 ಜನವರಿ 2021, 14:41 IST
ಅಕ್ಷರ ಗಾತ್ರ

ನವದೆಹಲಿ: ಭಾರತದ 72ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ದೇಶದ ಜನರನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ್ದಾರೆ. ಎಲ್ಲರಿಗೂ ರಾಷ್ಟ್ರಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ರಾಷ್ಟ್ರಪತಿ ಅವರ ಭಾಷಣ ಪ್ರಸಾರವಾಗಿದೆ.

* ಕೊರೊನಾ ವೈರಸ್‌ ಲಸಿಕೆ ಪಡೆಯುವಂತೆ ರಾಷ್ಟ್ರಪತಿ ದೇಶದ ಜನರಿಗೆ ಆಗ್ರಹಿಸಿದ್ದಾರೆ

* ಕೊರೊನಾ ವೈರಸ್‌ ಸಾಂಕ್ರಾಮಿಕದ ಕಠಿಣ ಪರಿಸ್ಥಿತಿಯ ಬಳಿಕ ಭಾರತದ ಆರ್ಥಿಕತೆ ಮತ್ತೆ ಚೇತರಿಸಿಕೊಳ್ಳುತ್ತಿದೆ.

* ಸರ್ಕಾರದ ಸ್ವಾವಲಂಬಿ ಯೋಜನೆಗಳು ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ.

* ಕೊರೊನಾ ವೈರಸ್‌ನ ಕುರಿತು ಅಧ್ಯಯನ ನಡೆಸಿ ಅತ್ಯಂತ ಕಡಿಮೆ ಅವಧಿಯಲ್ಲಿ ಲಸಿಕೆ ಅಭಿವೃದ್ಧಿ ಪಡಿಸುವ ಮೂಲಕ ನಮ್ಮ ವಿಜ್ಞಾನಿಗಳು ಇತಿಹಾಸ ಸೃಷ್ಟಿಸಿದ್ದಾರೆ.

* ದೇಶಕ್ಕೆ ರೈತರು ನೀಡುತ್ತಿರುವ ಕೊಡುಗೆ ಅಭಿನಂದನೀಯ.


* ಸಂವಿಧಾನದ ಮೇಲಿನ ನಮ್ಮ ನಂಬಿಕೆ ಮತ್ತು ರಾಷ್ಟ್ರಧ್ವಜಕ್ಕೆ ನಮ್ಮ ಗೌರವವನ್ನು ರಾಷ್ಟ್ರೀಯ ಹಬ್ಬದವಾದ ಗಣರಾಜ್ಯೋತ್ಸವದಲ್ಲಿ ಮಾಡುತ್ತೇವೆ.

* ಬಾಲ ಗಂಗಾಧರ ತಿಲಕ್‌, ಲಾಲಾ ಲಜಪತ್‌ ರಾಯ್‌, ಮಹಾತ್ಮ ಗಾಂಧಿ ಹಾಗೂ ಸುಭಾಷ್‌ ಚಂದ್ರ ಬೋಸ್‌ ರೀತಿಯ ಹಲವು ಮುಖಂಡರು ಹಾಗೂ ಚಿಂತಕರು ನಮ್ಮ ಸ್ವತಂತ್ರ ಹೋರಾಟಕ್ಕೆ ಸ್ಫೂರ್ತಿ ನೀಡಿದರು.

* ಕೋವಿಡ್‌–19 ಸಾಂಕ್ರಾಮಿಕ, ಪರಿಸರದಲ್ಲಿನ ಸವಾಲುಗಳ ನಡುವೆಯೂ ನಮ್ಮ ರೈತರು ಬೆಳೆ ಬೆಳೆಯುವುದನ್ನು ಮುಂದುವರಿಸಿದರು. ರಾಷ್ಟ್ರವು ರೈತರ ಕಲ್ಯಾಣಕ್ಕಾಗಿ ಸಂಪೂರ್ಣ ಬದ್ಧವಾಗಿದೆ.

* ನಮ್ಮ ಯೋಧರ ಶೌರ್ಯ, ರಾಷ್ಟ್ರ‍ಪ್ರೇಮ ಹಾಗೂ ತ್ಯಾಗ ಮನೋಭಾವದ ಬಗ್ಗೆ ದೇಶದ ಪ್ರತಿಯೊಬ್ಬ ನಾಗರಿಕ ಸಹ ಹೆಮ್ಮೆ ಪಡುತ್ತಾರೆ.

* ಸಿಯಾಚಿನ್‌ ಮತ್ತು ಗಾಲ್ವಾನ್‌ ಕಣಿವೆ ಪ್ರದೇಶದ ಮೈನಸ್‌ 50ರಿಂದ 60 ಡಿಗ್ರಿ ಸೆಲ್ಸಿಯಸ್‌ ಕೊರೆಯುವ ಚಳಿಯಲ್ಲಿ ಹಾಗೂ ಜೈಸ್ಮೇರ್‌ನ 50 ಡಿಗ್ರಿ ಸೆನ್ಸೆಯಸ್‌ ಅತಿಯಾದ ಬಿಸಿಲಿನ ಪ್ರದೇಶಗಳು, ವಿಸ್ತಾರ ಕರಾವಳಿ ಪ್ರದೇಶಗಳಲ್ಲಿ ನಮ್ಮ ಯೋಧರು ರಕ್ಷಣೆಗೆ ನಿಂತಿದ್ದಾರೆ.

* ಕೊರೊನಾ ವಾರಿಯರ್‌ಗಳಾದ ಸಾಮಾನ್ಯ ನಾಗರಿಕರು ಅಸಮಾನ್ಯರೆನಿಸಿದ್ದಾರೆ. ಕೋವಿಡ್‌ನಿಂದಾಗಿ ಸುಮಾರು 1.5 ಲಕ್ಷ ಜನರು ಸಾವಿಗೀಡಾಗಿದ್ದಾರೆ. ಅವರ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ.

* ವೈದ್ಯರು, ನರ್ಸ್‌ಗಳು, ಪ್ಯಾರಾಮೆಡಿಕ್‌ಗಳು, ಆರೋಗ್ಯ ವ್ಯವಸ್ಥೆಯ ಆಡಳಿತ ನಿರ್ವಹಣೆ ಮಾಡಿದವರು, ಶುಚಿತ್ವ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸಿಬ್ಬಂದಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೋವಿಡ್‌–19 ರೋಗಿಗಳ ಆರೈಕೆಗಾಗಿ ಕಾರ್ಯನಿರ್ವಹಿಸಿದ್ದಾರೆ. ಬಹಳಷ್ಟು ಜನರು ಮೃತಪಟ್ಟಿದ್ದಾರೆ.

* ವಿದ್ಯಾರ್ಥಿಗಳಿಗೆ ಕಲಿಯುವ ಪ್ರಕ್ರಿಯೆಯು ಕೊರೊನಾ ವೈರಸ್‌ ಸಾಂಕ್ರಾಮಿಕದಿಂದಾಗಿ ಹಳಿ ತಪ್ಪಿದಂತಾಯಿತು. ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಕ್ಷಿಪ್ರಗತಿಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣಕ್ಕೆ ಎದುರಾಗಿದ್ದ ತೊಡಕು ನಿವಾರಿಸಿದ್ದಾರೆ.

* ಕಠಿಣ ಪರಿಸ್ಥಿತಿಯಲ್ಲಿಯೂ ಬಿಹಾರ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ನಲ್ಲಿ ಚುನಾವಣೆ ಯಶಸ್ವಿಯಾಗಿ ನಡೆಸುವ ಮೂಲಕ ಚುನಾವಣೆ ಆಯೋಗ ಮತ್ತು ನಮ್ಮ ಪ್ರಜಾಪ್ರಭುತ್ವ ಹೊಸ ಮೈಲಿಗಲ್ಲು ತಲುಪಿದೆ.

* ನ್ಯಾಯಾಂಗವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ನ್ಯಾಯ ನೀಡುವುದು ಮುಂದುವರಿಸಿತು.

* ವಿದೇಶಿ ಹೂಡಿಕೆಗೆ ಭಾರತವು ಅತ್ಯುತ್ತಮ ತಾಣವಾಗಿ ತೋರುತ್ತಿದೆ, ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆಯಾಗಿರುವುದು ದೇಶದ ಆರ್ಥಿಕತೆಯ ಚೇತರಿಕೆಯನ್ನು ತೋರುತ್ತದೆ.

* ನಾವು ಭಾರತೀಯರು ಮನುಷ್ಯತ್ವಕ್ಕಾಗಿ ಬದುಕುತ್ತೇವೆ ಮತ್ತು ಸಾಯುತ್ತೇವೆ– ಮೈತಿಲಿ ಶರಣ್ ಗುಪ್ತ್ ಅವರ ಕವನದಲ್ಲಿ ಅದು ವ್ಯಕ್ತವಾಗಿದೆ.

* ಸಂಕಷ್ಟದ ಸಮಯವನ್ನು ಅವಕಾಶವನ್ನಾಗಿ ಬಳಸಿಕೊಂಡು ಪ್ರಧಾನಿ 'ಆತ್ಮ ನಿರ್ಭರ ಭಾರತ ಅಭಿಯಾನ' ಕರೆ ನೀಡಿದರು. ಸ್ವಾವಲಂಬಿ ಭಾರತದ ಪ್ರಯತ್ನಗಳಿಗೆ ಯುವ ಜನರು ಪುಷ್ಠಿ ನೀಡಲಿದ್ದಾರೆ.

* ಅಂತರರಾಷ್ಟ್ರೀಯ ವೇದಿಕೆಯಲ್ಲಿ ಜ್ಞಾನದ ಗೂಡಾಗಿ ಹೊಸ ಭಾರತವು ಹೊರಹೊಮ್ಮಲು 'ರಾಷ್ಟ್ರೀಯ ಶಿಕ್ಷಣ ನೀತಿ 2020' ಅಡಿಪಾಯ ಹಾಕಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT