ನವದೆಹಲಿ: ಕೋವಿಡ್ ಪಿಡುಗಿನ ಎರಡನೇ ಅಲೆ ಸಂದರ್ಭದಲ್ಲಿ ರಾಜ್ಯಗಳ ಉನ್ನತ ಮಟ್ಟದ ಸಮಿತಿಯ (ಎಚ್ಪಿಸಿ) ಸೂಚನೆ ಮೇರೆಗೆ ಜೈಲುಗಳಿಂದ ಬಿಡುಗಡೆ ಆಗಿರುವ ಕೈದಿಗಳನ್ನು ಮುಂದಿನ ಆದೇಶದವರೆಗೆ ಶರಣಾಗುವಂತೆ ಸೂಚಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ವಿಶೇಷ ನ್ಯಾಯಪೀಠವು, ಕೈದಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಮೇ 7ರಂದು ಹೊರಡಿಸಿದ್ದ ಆದೇಶದ ಪಾಲನೆಗೆ ಎಚ್ಪಿಸಿಗಳು ಅನುಸರಿಸಿದ ಮಾನದಂಡಗಳ ಕುರಿತ ಐದು ದಿನಗಳಲ್ಲಿ ವರದಿ ನೀಡುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಿತು.
ಕೋವಿಡ್ ಪಿಡುಗು ಉಲ್ಬಣಿಸಿದ್ದನ್ನು ಗಮನಿಸಿದ್ದ ಸುಪ್ರೀಂಕೋರ್ಟ್, ಕಳೆದ ವರ್ಷ ಜಾಮೀನು ಅಥವಾ ಪೆರೋಲ್ ಪಡೆದಿರುವ ಕೈದಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಮೇ 7ರಂದು ಆದೇಶಿಸಿತ್ತು.