ಢಾಬಾದಲ್ಲಿ ಪುಟಾಣಿಗಳೊಂದಿಗೆ ಚಹಾ ಸವಿದ ರಾಹುಲ್

ಝಾಲವಾಡ (ರಾಜಸ್ಥಾನ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ತಮ್ಮ 89ನೇ ದಿನದ ಭಾರತ್ ಜೋಡೊ ಯಾತ್ರೆ ಆರಂಭಿಸಿದರು. ಇಲ್ಲಿಗೆ ಸಮೀಪದ ಢಾಬಾವೊಂದರಲ್ಲಿ ಸಣ್ಣ ಮಕ್ಕಳೊಂದಿಗೆ ಚಹಾ ಸೇವಿಸಿ, ಸಂವಾದ ನಡೆಸಿದರು.
ಮಧ್ಯಪ್ರದೇಶದಲ್ಲಿ ಯಾತ್ರೆ ಪೂರ್ಣಗೊಳಿಸಿ ರಾಜಸ್ಥಾನದ ಗಡಿಯಲ್ಲಿರುವ ಝಾಲ್ರಾಪಾಟನ್ ಕಾಲಿತಲಾಯಿ ಗ್ರಾಮದಿಂದ ಬೆಳಿಗ್ಗೆ 6.10ಕ್ಕೆ ಯಾತ್ರೆ ಆರಂಭಿಸಿದ ರಾಹುಲ್ ಜತೆಗೆ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಮತ್ತು ಪ್ರಭಾವಿ ನಾಯಕ ಸಚಿನ್ ಪೈಲಟ್ ಅವರು ಒಗ್ಗಟ್ಟಿನಲ್ಲಿ ಹೆಜ್ಜೆ ಹಾಕಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ.ಸಿ. ವೇಣುಗೋಪಾಲ್, ರಾಜಸ್ಥಾನದ ಕಾಂಗ್ರೆಸ್ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ, ಹಿರಿಯ ನಾಯಕ ಭನ್ವಾರ್ ಜಿತೇಂದ್ರ ಸಿಂಗ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರತಾಪ್ ಸಿಂಗ್ ಖಚಾರಿಯಾವಾಸ್ ಯಾತ್ರೆಯಲ್ಲಿ ಜತೆಗೂಡಿದರು.
‘ಶೌರ್ಯದ ಮಣ್ಣಿಗೆ ಭಾರತ್ ಜೋಡೋ ಯಾತ್ರಾದ ನಮನ. ಹಲವು ಚರಿತ್ರೆಯ ನೆಲೆಯಾದ ರಾಜಸ್ಥಾನವು ಮತ್ತೊಂದು ಚರಿತ್ರೆ ನಿರ್ಮಿಸುತ್ತದೆ’ ಕಾಂಗ್ರೆಸ್ ಪಕ್ಷವು ಟ್ವೀಟ್ ಮಾಡಿದೆ.
ಯಾತ್ರೆಯಲ್ಲಿ ಅಸ್ವಸ್ಥರಾದ ಮಾಜಿ ಸಂಸದ ರಘುವೀರ್ ಮೀನಾ ಅವರನ್ನು ಆಂಬುಲೆನ್ಸ್ನಲ್ಲಿ ಕರೆದೊಯ್ದು ಝಾಲವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.
ರಾಜ್ಯದಲ್ಲಿ 17 ದಿನಗಳು ಸಂಚರಿಸಲಿರುವ ಯಾತ್ರೆಯು ಏಳು ಜಿಲ್ಲೆಗಳನ್ನು ಒಟ್ಟು ಸುಮಾರು 500 ಕಿ.ಮೀ. ಹಾದು ಹೋಗಲಿದೆ. ಇದೇ 21ರಂದು ಹರಿಯಾಣವನ್ನು ಪ್ರವೇಶಿಸಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.