ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆಯಂತೆ 'ಅಗ್ನಿಫಥ'ವನ್ನು ಮೋದಿ ಹಿಂತೆಗೆದುಕೊಳ್ಳಬೇಕಾಗುತ್ತದೆ: ರಾಹುಲ್‌

Last Updated 22 ಜೂನ್ 2022, 10:19 IST
ಅಕ್ಷರ ಗಾತ್ರ

ನವದೆಹಲಿ: ಅಗ್ನಿಪಥ ಯೋಜನೆ ಮೂಲಕ ಭಾರತೀಯ ಸೇನೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಂತೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ವಾಪಸ್‌ ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

'ಪ್ರಧಾನಿ ಮೋದಿ ಕೃಷಿ ಕಾಯ್ದೆಗಳನ್ನು ವಾಪಸ್‌ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದೆ. ಕೃಷಿ ಕಾಯ್ದೆಗಳನ್ನು ಹಿಂಪಡೆದರು. ಇದೀಗ ಪಿಎಂ ಮೋದಿ 'ಅಗ್ನಿಪಥ' ಯೋಜನೆಯನ್ನು ಹಿಂದಕ್ಕೆ ಪಡೆಯಬೇಕಾಗುತ್ತದೆ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಎಲ್ಲ ಯುವಕರು ನಮ್ಮ ಜೊತೆ ನಿಂತಿದ್ದಾರೆ' ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ರಾಷ್ಟ್ರದ ಬಹುದೊಡ್ಡ ಸಮಸ್ಯೆ ಉದ್ಯೋಗ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನಷ್ಟವನ್ನುಂಟು ಮಾಡುವ ಮೂಲಕ ರಾಷ್ಟ್ರದ ಬೆನ್ನು ಮೂಳೆಯನ್ನು ಮುರಿಯಲಾಗಿದೆ. ಎರಡು-ಮೂರು ಜನ ಉದ್ಯಮಿಗಳ ಕೈಗೆ ದೇಶವನ್ನು ಕೊಟ್ಟಿದ್ದಾರೆ. ಕೊನೆಗೆ ಉದ್ಯೋಗದ ಭರವಸೆಯಂತಿದ್ದ ಸೇನೆಯ ಬಾಗಿಲನ್ನು ಮುಚ್ಚಿದ್ದಾರೆ ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

'ಒಂದು ಶ್ರೇಣಿ, ಒಂದು ಪಿಂಚಣಿ' ಎನ್ನುತ್ತಿದ್ದರು. ಈಗ 'ಶ್ರೇಣಿಯೂ ಇಲ್ಲ, ಪಿಂಚಣಿಯೂ ಇಲ್ಲ' ಎನ್ನುತ್ತಿದ್ದಾರೆ. ಒಂದೆಡೆ ಚೀನಾ ನಮ್ಮ ಭೂಪ್ರದೇಶದ ಮೇಲೆ ಕೂತಿದೆ. ಇಂತಹ ಸಂದರ್ಭದಲ್ಲಿ ಸೇನೆಯನ್ನು ಬಲಪಡಿಸುವ ಬದಲು ದುರ್ಬಲಗೊಳಿಸುತ್ತಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ತಮ್ಮನ್ನು ಪ್ರಶ್ನಿಸಿದ ಸಂದರ್ಭ ಬೆಂಬಲಸಿದ ಪಕ್ಷದ ಕಾರ್ಯಕರ್ತರಿಗೆ ರಾಹುಲ್‌ ಗಾಂಧಿ ಇದೇ ಸಂದರ್ಭ ಧನ್ಯವಾದ ಹೇಳಿದ್ದಾರೆ. ಇ.ಡಿ ವಿಚಾರಣೆ ವೇಳೆ ತಾನೊಬ್ಬ ಮಾತ್ರವಲ್ಲ, ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ಪ್ರತಿಯೊಬ್ಬರು ತಮ್ಮ ಜೊತೆಗಿದ್ದರು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT