ಹೈದರಾಬಾದ್: ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶದಾದ್ಯಂತ ನಡೆಸುತ್ತಿರುವ 'ಭಾರತ್ ಜೋಡೊ ಯಾತ್ರೆ'ಯು ಭಾನುವಾರ 60 ದಿನಗಳನ್ನು ಪೂರ್ಣಗೊಳಿಸಿದೆ.
ರಾಹುಲ್ ಅವರು ಇಂದು (ನ.6) ತೆಲಂಗಾಣದ ಮೇದಕ್ ಜಿಲ್ಲೆಯ ಅಲ್ಲಾದುರ್ಗ್ನಲ್ಲಿ ಪಾದಯಾತ್ರೆ ಮುಂದುವರಿಸಿದ್ದಾರೆ. ಅವರಿಗೆತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಎ.ರೇವಂತ್ ರೆಡ್ಡಿ ಮತ್ತು ಇತರ ನಾಯಕರು ಸಾಥ್ ನೀಡಿದ್ದಾರೆ.
ರಸ್ತೆ ಬದಿಯಲ್ಲಿ ನಿಂತಿದ್ದವರತ್ತ ಕೈಬೀಸುತ್ತಾ ಸಾಗಿದ ರಾಹುಲ್, ಯಾತ್ರೆ ವೇಳೆಯೇ ಜನರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲಲ್ಲಿ ಯುವಕರೊಂದಿಗೆ ಸೆಲ್ಫಿಗೂ ಪೋಸ್ ನೀಡಿದ್ದಾರೆ.
ಸದ್ಯಯಾತ್ರೆಗೆ ಚಿಂತಾಲ್ ಲಕ್ಷಂಪುರ್ ಎಂಬ ಹಳ್ಳಿಯಲ್ಲಿ ಕೆಲಕಾಲ ಬಿಡುವು ನೀಡಲಾಗಿದೆ. ಸ್ಥಳೀಯ ನಾಯಕರು ಕೆಲವು ವರ್ಗದ ಜನ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದಾರೆ.
ದಿನದ ಯಾತ್ರೆಯುನಾರಾಯಣಖೇಡ್ನಲ್ಲಿರುವ ನಿಜಾಮ್ ಅಂಡರ್ಪಾಸ್ ಬಳಿ ಸಂಜೆ ಪುನರಾರಂಭವಾಗಲಿದ್ದು, ಮಹದೇವಪಲ್ಲಿ ಎಂಬಲ್ಲಿ ರಾತ್ರಿ ಮುಕ್ತಾಯವಾಗಲಿದೆ. ಬಳಿಕ ರಾಹುಲ್ ಅವರು ಕಮರೆಡ್ಡಿ ಜಿಲ್ಲೆಯ ಜಕ್ಕುಲ್ನಲ್ಲಿ ರಾತ್ರಿ ತಂಗಲಿದ್ದಾರೆ.
ಬಿಜೆಪಿ ಮತ್ತು ಆರ್ಎಸ್ಎಸ್ ದೇಶದಾದ್ಯಂತ ಹರಡುತ್ತಿರುವ ದ್ವೇಷ ಮತ್ತು ಅಶಾಂತಿಯಿಂದ ಜನರನ್ನು ಜಾಗೃತಗೊಳಿಸುವುದು 'ಭಾರತ್ ಜೋಡೊ ಯಾತ್ರೆ'ಯ ಉದ್ದೇಶ ಎಂದು ಕಾಂಗ್ರೆಸ್ ಹೇಳಿದೆ.
ಅಂದಹಾಗೆ, ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭವಾಗಿರುವ ಈ ಯಾತ್ರೆಯು 12 ರಾಜ್ಯಗಳಲ್ಲಿ ಒಟ್ಟು 3,750 ಕಿ.ಮೀ. ಸಾಗಲಿದೆ.ಈಗಾಗಲೇ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶದಲ್ಲಿ ಯಾತ್ರೆ ಪೂರ್ಣಗೊಂಡಿದ್ದು,ಶ್ರೀನಗರದಲ್ಲಿ ಮುಕ್ತಾಯವಾಗಲಿದೆ.