ಬಾರ್ಮರ್(ರಾಜಸ್ಥಾನ): ರಾಜಸ್ಥಾನದ ಬರ್ಮಾರ್ನ ಗಾಂಧವ್ ಭಕಾಸರ್ ವಿಭಾಗದ ರಾಷ್ಟ್ರೀಯ ಹೆದ್ದಾರಿ 925 ರಲ್ಲಿ ಸತ್ತಾ-ಗಂಧವ್ ವಿಸ್ತೀರ್ಣದಲ್ಲಿ ನಿರ್ಮಿಸಿರುವ ತುರ್ತು ವಿಮಾನ ಭೂಸ್ಪರ್ಶ ನೆಲೆಯನ್ನು (ಇಎಲ್ಎಫ್) ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಗುರುವಾರ ಉದ್ಘಾಟಿಸಿದರು.
ಇಬ್ಬರು ಕೇಂದ್ರ ಸಚಿವರು ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರನ್ನು ಹೊತ್ತ ಭಾರತೀಯ ವಾಯುಪಡೆಯ ಎ ಹರ್ಕ್ಯುಲಸ್ ಸಿ–130ಜೆ ವಿಮಾನ ಗುರುವಾರ ಈ ‘ತುರ್ತು ಭೂ ಸ್ಪರ್ಶ ನೆಲೆ‘ಯಲ್ಲಿ ‘ಅಣಕು ತುರ್ತು ಭೂ ಸ್ಪರ್ಶ‘ ಮಾಡಿತು. ರಾ.ಹೆ 925 ಭಾರತೀಯ ವಾಯುಪಡೆ ವಿಮಾನಗಳ ಭೂ ಸ್ಪರ್ಶಕ್ಕಾಗಿ ಬಳಸುತ್ತಿರುವ ಭಾರತದ ಮೊದಲ ರಾಷ್ಟ್ರೀಯ ಹೆದ್ದಾರಿಯಾಗಿದೆ.
ರಾ.ಹೆ 925ರಲ್ಲಿನ ತುರ್ತು ಲ್ಯಾಂಡಿಂಗ್ ಸ್ಟ್ರಿಪ್ನಲ್ಲಿ ನಡೆದ ಬಹು ಯುದ್ಧವಿಮಾನಗಳ ಕಾರ್ಯಚಾರಣೆಗೂ ಈ ಇಬ್ಬರು ಸಚಿವರು ಸಾಕ್ಷಿಯಾದರು. ಸಚಿವರ ಸಮ್ಮುಖದಲ್ಲಿ ಸುಖೋಯಿ–30ಎಂಕೆಐ ಯುದ್ಧ ವಿಮಾನ ಕೂಡ ‘ಅಣಕು ತುರ್ತು ಭೂ ಸ್ಪರ್ಶ‘ ಮಾಡಿತು.
ಎ–32 ಸೇನಾ ವಿಮಾನ ಮತ್ತು ಐಎಎಫ್ನ ಎಂಐ–17ವಿ5 ಹೆಲಿಕಾಪ್ಟರ್ ಸಹ ಹೆದ್ದಾರಿ ಮೇಲಿನ ತುರ್ತು ಭೂ ಸ್ಪರ್ಶ ಸ್ಥಳದಲ್ಲಿ ಇಳಿಯಿತು. ಈ ಮೂಲಕ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಈ ವಾಯು ನೆಲೆ, ಸಹಾಯಕ ಮಿಲಿಟರಿ ವಾಯುನೆಲೆಯಾಗಿ ಕಾರ್ಯನಿರ್ವಹಿಸಲು ಸಂಪೂರ್ಣ ಸಿದ್ಧವಾಗಿದೆ ಎಂಬುದನ್ನು ಪ್ರದರ್ಶಿಸಿತು.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಎಚ್ಎಐ) ಭಾರತೀಯ ವಾಯುಪಡೆಗೆ ತುರ್ತು ಭೂಸ್ಪರ್ಶದ ಸೌಲಭ್ಯಕ್ಕಾಗಿ (ಇಎಲ್ಎಫ್) ರಾ.ಹೆ 925ರ ಸತ್ತಾ – ಗಾಂಧವ್ ಸ್ಟ್ರೆಚ್ನಲ್ಲಿ 3 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಿದೆ.