ಥಾಣೆ: ಶಿವಸೇನಾ ಬಂಡಾಯ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಅಂಬರನಾಥ ಕ್ಷೇತ್ರದ ಶಾಸಕ ಬಾಲಾಜಿ ಕಿಣಿಕರ್ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಿಣಿಕರ್ ಒಬ್ಬ ವಿಶ್ವಾಸದ್ರೋಹಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅನಾಮಧೇಯ ಕೊಲೆ ಬೆದರಿಕೆ ಪತ್ರವು ಥಾಣೆ ಜಿಲ್ಲೆಯ ಅಂಬರನಾಥದಲ್ಲಿರುವ ಕಚೇರಿಯ ವಿಳಾಸಕ್ಕೆ ಬುಧವಾರ ಬಂದಿದೆ.
ಅಂಬರನಾಥದಲ್ಲಿ ಶಿವಸೈನಿಕರಿಗೆ ಕಿಣಿಕರ್ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದ್ದು, ಒಂದು ದಿನ ಕಿಣಿಕರ್ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಏಕನಾಥ ಶಿಂಧೆ ಅವರ ನಾಯಕತ್ವದಲ್ಲಿ ಶಿವಸೇನಾ ಶಾಸಕರು ಬಂಡಾಯವೆದ್ದಿದ್ದರಿಂದಮಹಾ ವಿಕಾಸ ಆಘಾಡಿ ಸರ್ಕಾರ ಪತನಗೊಂಡಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ಅವರು ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷ ಬಿಜೆಪಿಯ ನಾಯಕದೇವೇಂದ್ರ ಫಡಣವೀಸ್ ಅವರ ನೇತೃತ್ವದಲ್ಲಿ ನೂತನ ಸರ್ಕಾರ ರಚನೆಯ ಪ್ರಯತ್ನ ನಡೆದಿದೆ.