ಡೆಹ್ರಾಡೂನ್: ಸೇನಾಪಡೆಗಳ ಮುಖ್ಯಸ್ಥರಾಗಿದ್ದ ಜ. ಬಿಪಿನ್ ರಾವತ್ ಅವರ ತಮ್ಮ, ಇತ್ತೀಚೆಗೆ ಬಿಜೆಪಿ ಸೇರಿದ್ದ ಕರ್ನಲ್ ವಿಜಯ್ ರಾವತ್ ಅವರು ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ಧಾರೆ.
ಪಕ್ಷದ ಮುಖಂಡರು ಸ್ಪರ್ಧಿಸುವಂತೆ ಒತ್ತಾಯಿಸಿದ್ದರು. ಆದರೆ, ಅದನ್ನು ನಿರಾಕರಿಸಿದ್ದೇನೆ ಎಂದು ವಿಜಯ್ ತಿಳಿಸಿದ್ಧಾರೆ. ಸ್ಪರ್ಧಿಸಲೇಬೇಕು ಎಂಬ ಒತ್ತಡ ಬಂದರೆ ಏನು ಮಾಡುವಿರಿ ಎಂಬ ಪ್ರಶ್ನೆಗೆ, ಶೇ 99ರಷ್ಟು ಭಾಗ ಅದನ್ನು ನಿರಾಕರಿಸಲಾಗುವುದು ಎಂದು ಅವರು ಹೇಳಿದ್ಧಾರೆ.
‘ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಆಸಕ್ತಿ ಇಲ್ಲ. ಉತ್ತರಾಖಂಡದ ಜನರಿಗೆ ಸೇವೆ ಸಲ್ಲಿಸಬೇಕು ಎಂಬುದೇ ನನ್ನ ಧ್ಯೇಯ’ ಎಂದು ಅವರು ಹೇಳಿದ್ದಾರೆ.
ಚುನಾವಣೆಗೆ ಕೆಲವೇ ದಿನಗಳಿರುವಾಗ ವಿಜಯ್ ಅವರು ಬಿಜೆಪಿ ಸೇರಿದ್ದರು. ಹಾಗಾಗಿ, ಅವರು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ವರದಿಗಳು ಪ್ರಕಟವಾಗಿದ್ದವು.