ಹೈದರಾಬಾದ್: ಬೃಹತ್ ಗಿಡ ನೆಡುವ ಕಾರ್ಯಕ್ರಮ, ಯಲ್ಲಮ್ಮದೇವಿಗೆ 2.5 ಕೆಜಿ "ಚಿನ್ನದ ಸೀರೆ" ಮತ್ತು ರಕ್ತದಾನ ಶಿಬಿರ ನಡೆಸುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಬುಧವಾರ ತಮ್ಮ 68 ನೇ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ.
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಲವು ನಾಯಕರು ಮತ್ತು ಚಲನಚಿತ್ರ ತಾರೆಯರು ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ರಾವ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಯಲ್ಲಮ್ಮ ದೇವಿಗೆ ಬಂಗಾರದ ಸೀರೆ: ಕೆಸಿಆರ್ ಜನ್ಮದಿನದಂದು ಇಬ್ಬರು ಅಭಿಮಾನಿಗಳು ಹೈದರಾಬಾದಿನ ಬಾಲ್ಕಂಪೇಟೆಯ ದೇವಸ್ಥಾನದಲ್ಲಿ ಯಲ್ಲಮ್ಮ ದೇವಿಗೆ 2.5 ಕೆಜಿ ಚಿನ್ನದಿಂದ ಮಾಡಿದ ಸೀರೆಯನ್ನು ಅರ್ಪಿಸಿದರು. ರಾಜ್ಯ ಪಶುಸಂಗೋಪನಾ ಸಚಿವ ಟಿ.ಶ್ರೀನಿವಾಸ್ ಯಾದವ್ ಅವರು ಸೀರೆಯನ್ನು ದೇವಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನದ ಸೀರೆಯನ್ನು ಉಡುಗೊರೆಯಾಗಿ ನೀಡಿ ದಾನಿಗಳ ಕುಟುಂಬ ಮತ್ತು ರಾಜ್ಯದ ಜನರಿಗೆ ಒಳ್ಳೆಯದಕ್ಕೆ ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.
ಕೆ ಚಂದ್ರಶೇಖರ ರಾವ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಟಿಆರ್ಎಸ್ ವತಿಯಿಂದ ರಕ್ತದಾನ ಶಿಬಿರಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ರಾವ್ ಅವರ ಆಪ್ತ ಸಂಬಂಧಿ ಟಿಆಆರ್ಎಸ್ ಸಂಸದ ಜೆ.ಸಂತೋಷ್ ಕುಮಾರ್ ಅವರ "ಗ್ರೀನ್ ಇಂಡಿಯಾ ಚಾಲೆಂಜ್" ನ ಅಂಗವಾಗಿ ಅವರು ನಡೆಸುತ್ತಿರುವ "ಕೋಟಿ ವೃಕ್ಷಾರ್ಚನ" (ಒಂದು ಕೋಟಿ ಸಸಿಗಳನ್ನು ನೆಡುವುದು) ಭಾಗವಾಗಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು. ಸಂತೋಷ್ ಕುಮಾರ್ ಅವರ ಕೋರಿಕೆಯ ಮೇರೆಗೆ ರಾವ್ ಅವರೇ 'ರುದ್ರಾಕ್ಷ' ಸಸಿ ನೆಟ್ಟಿದ್ದಾರೆ ಎಂದು ಮತ್ತೊಂದು ಅಧಿಕೃತ ಪ್ರಕಟಣೆ ತಿಳಿಸಿದೆ.