ನವದೆಹಲಿ: ಕೋವಿಡ್-19 ಸ್ಥಿತಿ ಬಗೆಹರಿಯುವವರೆಗೂ ಬಿಹಾರ ವಿಧಾನಸಭೆಯ ಚುನಾವಣೆಯನ್ನು ಮುಂದೂಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡಿದೆ. ಚುನಾವಣೆಯನ್ನು ಮುಂದೂಡಲು ಕೋವಿಡ್ ಕಾರಣವಾಗಬಾರದು ಎಂದುಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು, ‘ಚುನಾವಣಾ ಆಯೋಗವು ಎಲ್ಲ ಅಂಶಗಳನ್ನು ಪರಿಗಣಿಸಲಿದೆ’ ಎಂದು ಅಭಿಪ್ರಾಯಪಟ್ಟಿತು. ನ್ಯಾಯಮೂರ್ತಿಗಳಾದ ಆರ್.ಎಸ್.ರೆಡ್ಡಿ ಮತ್ತು ಎಂ.ಆರ್.ಶಾ ಅವರು ಪೀಠದ ಇತರ ಸದಸ್ಯರು.
ಅರ್ಜಿದಾರರಾದ ಅವಿನಾಶ್ ಠಾಕೂರ್ ಅವರು, ಕೋವಿಡ್ ಕಾರಣದಿಂದಾಗಿ ಚುನಾವಣೆ ಮುಂದೂಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದರು.