ನವದೆಹಲಿ: ಒಂದು ಶ್ರೇಣಿ–ಒಂದು ಪಿಂಚಣಿ ಯೋಜನೆಯಡಿಯ ಅರ್ಹ ಪಿಂಚಣಿದಾರರಿಗೆ ನಾಲ್ಕು ಕಂತುಗಳ ಬದಲು ಒಂದೇ ಕಂತಿನಲ್ಲಿ ಬಾಕಿ ಮೊತ್ತ ಪಾವತಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ನಿವೃತ್ತ ಸೈನಿಕರು, ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಇಂಡಿಯನ್ ಎಕ್ಸ್–ಸರ್ವಿಸ್ಮನ್ ಮೂವ್ಮೆಂಟ್ (ಐಇಎಸ್ಎಂ) ಸಂಘಟನೆಯ ಪರವಾಗಿ ವಕೀಲ ಬಾಲಾಜಿ ಶ್ರೀನಿವಾಸನ್ ಅವರು ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಇದೇ 27ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲಾ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ತಿಳಿಸಿದೆ.