ನವದೆಹಲಿ (ಪಿಟಿಐ): ಬಳ್ಳಾರಿಯಲ್ಲಿ ಒಂದು ತಿಂಗಳು ನೆಲೆಸಲು, ಬಾಣಂತಿಯಾಗಿರುವ ಮಗಳನ್ನು ಭೇಟಿ ಮಾಡಲು ಅನುಮತಿ ಕೋರಿ ಗಣಿ ಉದ್ಯಮಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಅ.10ರಂದು ಆದೇಶ ನೀಡಲಿದೆ.
ಬಹುಕೋಟಿ ಗಣಿ ಹಗರಣದಲ್ಲಿ ಬಂಧಿತರಾಗಿದ್ದ ರೆಡ್ಡಿ ಅವರಿಗೆ ಷರತ್ತಿಗೊಳಪಟ್ಟು 2015ರಲ್ಲಿ ಜಾಮೀನು ನೀಡಲಾಗಿತ್ತು. ಆಗ, ಸುಪ್ರೀಂ ಕೋರ್ಟ್ ವಿಧಿಸಿದ್ದ ಷರತ್ತುಗಳಲ್ಲಿ ಕರ್ನಾಟಕದ ಬಳ್ಳಾರಿ, ಆಂಧ್ರಪ್ರದೇಶದ ಕಡಪ, ಅನಂತಪುರಕ್ಕೆ ಭೇಟಿ ನೀಡಬಾರದು ಎಂಬುದು ಸೇರಿತ್ತು.
ನ್ಯಾಯಮೂರ್ತಿಗಳಾದ ಎಂ.ಆರ್.ಶಾ, ಕೃಷ್ಣಮುರಾರಿ ಅವರಿದ್ದ ನ್ಯಾಯಪೀಠವು, ನಿತ್ಯ ಪ್ರಕರಣದ ವಿಚಾರಣೆ ನಡೆಸುವಂತೆ ಕೆಳಹಂತದ ಕೋರ್ಟ್ಗೆ ಆದೇಶಿಸಿದ್ದು, ಸಾಕ್ಷಿಗಳು ಹಾಜರಿರುವಂತೆ ನೋಡಿಕೊಳ್ಳುವುದು ತನಿಖಾಧಿಕಾರಿಗಳ ಹೊಣೆಗಾರಿಕೆ ಎಂದೂ ಸೂಚಿಸಿತ್ತು.
ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಯಂತೆ ಸಿಬಿಐ, ‘ಶಿಶುವಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದು, ತಾಯಿ ಮತ್ತು ಶಿಶು ಸದ್ಯ ಬಳ್ಳಾರಿಯಲ್ಲಿ ನೆಲೆಸಿದ್ದಾರೆ’ ಎಂದು ಮಾಹಿತಿ ನೀಡಿತು. ಶುಕ್ರವಾರ ವಸ್ತುಸ್ಥಿತಿ ವರದಿ ಸಲ್ಲಿಸುವಂತೆಯೂ ಕೋರ್ಟ್ ಸಿಬಿಐಗೆ ಸೂಚಿಸಿತು.