ನವದೆಹಲಿ: ಆಮ್ಲಜನಕ ಪೂರೈಕೆ ಕುರಿತ ಆದೇಶ ಪರಿಷ್ಕರಣೆವರೆಗೂ ದೆಹಲಿಗೆ ನಿತ್ಯವೂ 700 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸಬೇಕು ಎಂದು ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಸೂಚಿಸಿದೆ.
ನಿತ್ಯವೂ 700 ಟನ್ ಆಮ್ಲಜನಕ ಪೂರೈಕೆ ಕುರಿತು ತನ್ನ ಅದೇಶ ಪಾಲನೆಯಾಗದ್ದಕ್ಕೆ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸುವ ದೆಹಲಿ ಹೈಕೋರ್ಟ್ ಕ್ರಮಕ್ಕೆ ಎರಡು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.
ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರಿದ್ದ ಪೀಠ ಈ ಸೂಚನೆ ನೀಡಿತು.
ದೆಹಲಿ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಹುಲ್ ಮೆಹ್ರಾ ಅವರು, ’ದೆಹಲಿಗೆ ಬೆಳಿಗ್ಗೆ 9 ಗಂಟೆವರೆಗೆ 86 ಮೆಟ್ರಿಕ್ ಟನ್ ಪೂರೈಕೆಯಾಗಿದೆ. 16 ಮೆಟ್ರಿಕ್ ಟನ್ ಪೂರೈಕೆ ಹಂತದಲ್ಲಿದೆ‘ ಎಂದು ಮಾಹಿತಿ ನೀಡಿದ್ದರು.
ನಿತ್ಯ 700ಮೆಟ್ರಿಕ್ ಟನ್ ಪೂರೈಕೆ ಆಗಬೇಕು ಎಂದು ನಾವು ಬಯಸುತ್ತೇವೆ. ಇದೊಂದು ವ್ಯವಹಾರ. ಕಠಿಣ ನಿಲುವು ಕೈಗೊಳ್ಳುವ ಹಂತಕ್ಕೆ ಹೋಗುವಂತೆ ಮಾಡಬೇಡಿ ಎಂದು ಪೀಠ ಕಟುವಾಗಿ ಹೇಳಿತು.