ನವದೆಹಲಿ: ‘ನಗರದ ರಸ್ತೆಗಳಿಂದ ಬಿಡಾಡಿ ದನಗಳನ್ನು ತೆರವುಗೊಳಿಸಲು ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಿ’ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಮಹಾನಗರ ಪಾಲಿಕೆಗೆ ಸೂಚಿಸಿದೆ.
ದನಗಳು ರಸ್ತೆ ಮೇಲೆ ನಿಲ್ಲುವುದು ಹಾಗೂ ಕೂರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿಯಾಗಿದ್ದು, ದಟ್ಟಣೆ ಹಾಗೂ ಅಪಘಾತಕ್ಕೂ ಎಡೆ ಮಾಡಿಕೊಡುತ್ತಿದೆ ಎಂದು ವಕೀಲ ಫರಜ್ ಖಾನ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಮಂಗಳವಾರ ಇದರ ವಿಚಾರಣೆ ನಡೆಸಿತು.
‘ಪಾಲಿಕೆಯು ದನಗಳನ್ನು ಗೋಶಾಲೆಗಳಿಗೆ ರವಾನಿಸುವುದೂ ಸೇರಿದಂತೆ ಇನ್ನಿತರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ತಿಂಗಳಿಗೊಮ್ಮೆ ಪರಿಸ್ಥಿತಿ ಅವಲೋಕಿಸುತ್ತಿದೆ. ಅಕ್ರಮ ಡೈರಿಗಳ ಮಾಲೀಕರಿಗೆ ನೋಟಿಸ್ ಕೂಡ ಜಾರಿಗೊಳಿಸಲಾಗಿದೆ’ ಎಂದು ಮಹಾನಗರ ಪಾಲಿಕೆ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.