ಚೆನ್ನೈ: ತಮಿಳು ನಟ ದಳಪತಿ ವಿಜಯ್ ಅವರು ಮಂಗಳವಾರ ಮತ ಚಲಾಯಿಸಲು ಸೈಕಲ್ ಏರಿ ಬಂದದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ತಮ್ಮ ಮನೆಯ ಸನಿಹವೇ ಇದ್ದ ಮತಗಟ್ಟೆಗೆ ಹೋಗಲು ವಿಜಯ್ ಅವರು ಸೈಕಲ್ ಬಳಸಿದರು. ಅವರ ಸೈಕಲ್ ಸವಾರಿಯ ವೇಳೆ ನೂರಾರು ಮಂದಿ ಅವರನ್ನು ಬೈಕ್ಗಳಲ್ಲಿ ಹಿಂಬಾಲಿಸಿದರು. ವಿಡಿಯೊ ಚಿತ್ರೀಕರಿಸಿದರು, ಚಿತ್ರ ತೆಗೆದುಕೊಂಡರು. ಆಗ ಸಂಚಾರ ದಟ್ಟಣೆ ಉಂಟಾದ ಕಾರಣ, ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ಇದು ಭಾರಿ ಚರ್ಚೆಗೆ ಕಾರಣವಾಯಿತು. ‘ವಿಜಯ್ ಅವರು ಪೆಟ್ರೋಲ್ ಬೆಲೆ ಏರಿಕೆಯ ವಿರುದ್ಧ ಪ್ರತಿಭಟಿಸಲು ಸೈಕಲ್ ಏರಿದ್ದಾರೆ’ ಎಂದು ಹಲವರು ಟ್ವೀಟ್ ಮಾಡಿದರು. ಇದರ ಬೆನ್ನಲ್ಲೇ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು, ‘ಪೆಟ್ರೋಲ್ ಬೆಲೆ ಏರಿಸುತ್ತಿರುವ ಬಿಜೆಪಿ ಜತೆ ಕೈಜೋಡಿಸಿರುವ ಎಐಎಡಿಂಕೆಗೆ ಸ್ಪಷ್ಟ ಸಂದೇಶ ರವಾನಿಸಲೇ ವಿಜಯ್ ಸೈಕಲ್ ಏರಿದ್ದಾರೆ’ ಎಂದು ಟ್ವೀಟ್ ಮಾಡಿದರು.
ಈ ಟ್ವೀಟ್ಗೆ ಬಿಜೆಪಿಯ ಖುಷ್ಬು ಸುಂದರ್ ಅವರು ತಿರುಗೇಟು ನೀಡಿದರು. ‘ವಿಜಯ್ ಪೆಟ್ರೋಲ್ ಏರಿಕೆ ವಿರುದ್ಧ ಪ್ರತಿಭಟಿಸಲು ಸೈಕಲ್ ಏರಿಲ್ಲ. ನೀವು ಬೇರೆಯವರ ಸೈಕಲ್ ಏರುವುದನ್ನು ನಿಲ್ಲಿಸಿ’ ಎಂದು ಟ್ವೀಟ್ ಮಾಡಿದರು. ಅಷ್ಟರಲ್ಲೇ ವಿಜಯ್ ಆಪ್ತರು ಈ ಬಗ್ಗೆ ಸ್ಪಷ್ಟನೆ ನೀಡಿದರು. ‘ವಿಜಯ್ ಅವರ ಮನೆಯ ಸನಿಹವೇ ಮತಗಟ್ಟೆ ಇತ್ತು. ಅಲ್ಲಿ ರಸ್ತೆ ಚಿಕ್ಕದು. ಕಾರಿನಲ್ಲಿ ಹೋದರೆ, ಸಂಚಾರ ದಟ್ಟಣೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಸೈಕಲ್ನಲ್ಲಿ ಹೋದರು’ ಎಂದು ವಿಜಯ್ ಅವರ ಪ್ರಚಾರ ಸಿಬ್ಬಂದಿ ಟ್ವೀಟ್ ಮಾಡಿದರು.