ಮುಂಬೈ: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಗೃಹ ಸಚಿವ ಅನಿಲ್ ದೇಶಮುಖ್ ಹಾಗೂ ಈ ಆರೋಪ ಮಾಡಿರುವ ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್ ವಿರುದ್ಧ ಸ್ವತಂತ್ರ ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಶಿಕ್ಷಕರೊಬ್ಬರು ಬಾಂಬೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮಂಗಳವಾರ ಸಲ್ಲಿಸಿದ್ದಾರೆ.
ಮುಂಬೈನ ಮೋಹನ್ ಪ್ರಭಾಕರ್ ಭಿಡೆ ಪಿಐಎಲ್ ಸಲ್ಲಿಸಿರುವ ಶಿಕ್ಷಕ.
‘ದೇಶಮುಖ್ ಹಾಗೂ ಸಿಂಗ್ ನಡುವಿನ ಸಂಭಾಷಣೆಯನ್ನು ನಾನು ಆಲಿಸಿದ್ದೇನೆ. ಇಬ್ಬರ ಪೈಕಿ ಒಬ್ಬರು ತಪ್ಪಿತಸ್ಥರಾಗಿರುವುದು ನಿಶ್ಚಿತ. ಇಲ್ಲವೇ, ಸತ್ಯವನ್ನು ಹೇಳುತ್ತಿಲ್ಲ’ ಎಂದು ಭಿಡೆ ಅವರು ಅರ್ಜಿಯಲ್ಲಿ ಹೇಳಿದ್ದಾರೆ.
‘ದೇಶಮುಖ್ ಹಾಗೂ ಸಿಂಗ್ ವಿರುದ್ಧ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲು ಆದೇಶಿಸಬೇಕು. ಇಲ್ಲವೇ, ಸುಪ್ರೀಂಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಯಬೇಕು’ ಎಂದು ಕೋರಿದ್ದಾರೆ.
ಈ ಅರ್ಜಿಯ ತುರ್ತು ವಿಚಾರಣೆಯನ್ನು ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿ ದೀಪಂಕರ್ ದತ್ತಾ ಅವರು ಬುಧವಾರ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಇನ್ನೊಂದೆಡೆ, ಸಚಿವ ದೇಶಮುಖ್ ವಿರುದ್ಧ ತಾನು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಸಿಂಗ್ ಅವರು ಸಲ್ಲಿಸಿರುವ ಪಿಐಎಲ್ನ ವಿಚಾರಣೆ ಸಹ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿ ನೇತೃತ್ವದ ಪೀಠದಲ್ಲಿ ಬುಧವಾರ (ಮಾ.31) ನಡೆಯಲಿದೆ.