ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿಜೆಪಿಯಲ್ಲಿ ಒಳಜಗಳಗಳ ಕುರಿತ ವರದಿಗಳ ಮಧ್ಯೆ ಬಿಜೆಪಿಯಲ್ಲಿ ಉಳಿದುಕೊಳ್ಳಲು ಬೆನ್ನುಮೂಳೆ ಇಲ್ಲದವರು ಟಿಎಂಸಿಗೆ ವಾಪಾಸಾಗಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೇಸರಿ ಪಕ್ಷದ ಸಂಸದರೊಬ್ಬರು ಹೇಳಿದ್ದಾರೆ.
ಬೃಹತ್ ಜನಾದೇಶದೊಂದಿಗೆ ಚುನಾಯಿತವಾದ ಸರ್ಕಾರದ ವಿರುದ್ಧ ‘ರಾಷ್ಟ್ರಪತಿ ಆಡಳಿತ ಹೇರಿಕೆ ಬೆದರಿಕೆಗಳನ್ನು ಜನರು ಸಹಿಸುವುದಿಲ್ಲ’ ಎಂದು ಪಕ್ಷದ ಮುಖಂಡ ರಾಜೀಬ್ ಬ್ಯಾನರ್ಜಿ ಮಂಗಳವಾರ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ ಬಿಷ್ಣುಪುರದ ಬಿಜೆಪಿ ಸಂಸದ ಸೌಮಿತ್ರಾ ಖಾನ್ ಈ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡಿರುವ ಅವರು, ‘42 ಬಿಜೆಪಿ ಕಾರ್ಯಕರ್ತರು ಕೊಲ್ಲಲ್ಪಟ್ಟಾಗ ಮೌನವಾಗಿರುವುದು ಆಡಳಿತ ಪಕ್ಷಕ್ಕೆ ಬೆಂಬಲವನ್ನು ಸೂಚಿಸುತ್ತದೆ. ನೀವು ಮಂತ್ರಿಯಾಗಲು ಸಾಧ್ಯವಾಗದ ಕಾರಣ ನಿಮ್ಮ ಹಳೆಯ ಪಕ್ಷಕ್ಕೆ ಮರು ಪ್ರವೇಶವನ್ನು ಬಯಸುತ್ತೀರಾ?’ ಎಂದು ಪ್ರಶ್ನಿಸಿದ್ದಾರೆ.
ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಸಚಿವರಾಗಿದ್ದ ಬ್ಯಾನರ್ಜಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರಿಕೊಂಡರು. ಆದರೆ, ಹೌರಾ ಜಿಲ್ಲೆಯ ಡೊಮ್ಜುರ್ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲರಾದರು.
ಏತನ್ಮಧ್ಯೆ, ‘ಮಮತಾ ಬ್ಯಾನರ್ಜಿಗೆ ದ್ರೋಹ ಮಾಡುವವರಿಗೆ ಬಂಗಾಳದಲ್ಲಿ ಸ್ಥಾನವಿಲ್ಲ’ ಎಂ ಘೋಷಣೆ ಇರುವ ಪೋಸ್ಟರ್ಗಳು ಬುಧವಾರ ಡೊಮ್ಜೂರ್ನ ಕೆಲವು ಸ್ಥಳಗಳಲ್ಲಿ ಕಾಣಿಸಿಕೊಂಡವು.
ಬಿಜೆಪಿ ಸೇರಿದ್ದ ಹಲವು ಮುಖಂಡರು ಕಳೆದ ಕೆಲವು ವಾರಗಳಲ್ಲಿ ಮಮತಾ ಬ್ಯಾನರ್ಜಿ ಶಿಬಿರಕ್ಕೆ ಮತ್ತೆ ಸೇರಲು ಇಚ್ಛಿಸಿದ್ದಾರೆ. ಅದರಲ್ಲಿ ಶಾಸಕರಾದ ಸೋನಾಲಿ ಗುಹಾ ಮತ್ತು ದೀಪೇಂದು ಬಿಶ್ವಾಸ್ ಪ್ರಮುಖರು.