ಆಗ್ರಾ: ತಿರಂಗಾ ಯಾತ್ರೆ ಕೈಗೊಂಡಿದ್ದ ವೇಳೆ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದಡಿ ಆಮ್ ಅದ್ಮಿ ಪಕ್ಷದ 17 ಮುಖಂಡರ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಇವರಲ್ಲಿ ಸೇರಿದ್ದಾರೆ. ಭಾನುವಾರ ನಡೆದ ಯಾತ್ರೆಯಲ್ಲಿ ಸುಮಾರು 500 ಜನ ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
50 ಜನರ ಉಪಸ್ಥಿತಿಯಲ್ಲಿ, ಕೋವಿಡ್ ಮಾರ್ಗಸೂಚಿಯಡಿ ತಿರಂಗಾ ಯಾತ್ರೆ ಆಯೋಜಿಸಲು ಅನುಮತಿ ಪಡೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆಮ್ ಅದ್ಮಿ ಪಕ್ಷವು ಉತ್ತರ ಪ್ರದೇಶದ ಆಯೋಧ್ಯಾ, ಲಖನೌ, ನೋಯ್ಡಾ ಸೇರಿ ವಿವಿಧೆಡೆ ಅಮೃತ ಸ್ವಾತಂತ್ರ್ಯೋತ್ಸವ ನಿಮಿತ್ತ ಯಾತ್ರೆ ಆಯೋಜಿಸಿದೆ.
ಅಯೋಧ್ಯೆಯಲ್ಲಿ ಸೆ. 14ರಂದು ಹಾಗೂ ನಂತರ ರಾಜ್ಯದ 403 ವಿಧಾನಸಭೆ ಕ್ಷೇತ್ರಗಳಲ್ಲಿ ಇಂತಹ ಯಾತ್ರೆಯನ್ನು ಆಯೋಜಿಸಲು ಎಎಪಿ ನಿರ್ಧರಿಸಿತ್ತು.
ಎಎಪಿಯ 17 ಮುಖಂಡರು ಮತ್ತು ಹೆಸರು ಗುರುತಿಸಲಾಗದ ಇತರೆ 500 ಜನರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.