ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ತೊರೆದು ಬಿಜೆಪಿಗೆ ಸೇರುವ ಪ್ರಕ್ರಿಯೆ ಮುಂದುವರಿದಿದೆ. ಪಶ್ಚಿಮ ವರ್ದಮಾನ್ ಜಿಲ್ಲೆಯ ಪಾಂಡಬೇಶ್ವರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ, ಅಸನ್ಸೋಲ್ನ ಮೇಯರ್ ಜಿತೇಂದ್ರ ತಿವಾರಿ ಮಂಗಳವಾರ ಬಿಜೆಪಿಗೆ ಸೇರಿದರು.
ಹೂಗ್ಲಿ ಜಿಲ್ಲೆಯ ಶ್ರೀರಾಂಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರ ಸಮ್ಮುಖದಲ್ಲಿ ತಿವಾರಿ ಬಿಜೆಪಿ ಸೇರ್ಪಡೆಗೊಂಡರು.
ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ 'ಒಳ್ಳೆ ಬೆಳವಣಿಗೆ,' ಎಂದು ಹೇಳಿದೆ.
'ನಾನು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಲು ಬಯಸಿದ್ದರಿಂದ ಬಿಜೆಪಿಗೆ ಸೇರಿದ್ದೇನೆ. ಟಿಎಂಸಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ,' ಎಂದು ಜಿತೇಂದ್ರ ತಿವಾರಿ ಹೇಳಿದ್ದಾರೆ.
ಟಿಎಂಸಿ ನಾಯಕತ್ವದ ವಿರುದ್ಧ ತಿರುಗಿಬಿದ್ದಿದ್ದ ಜಿತೇಂದ್ರ ತಿವಾರಿ ಅವರು ಬಿಜೆಪಿ ಕಡೆ ಮುಖ ಮಾಡಿದ್ದರು. ಆದರೆ, ಕಳೆದ ಡಿಸೆಂಬರ್ನಲ್ಲಿ ಬಿಜೆಪಿ ಜಿತೇಂದ್ರ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ನಿರಾಕರಿಸಿತ್ತು. ಹೀಗಾಗಿ ಅವರು ತಣ್ಣಗಾಗಿದ್ದರು.
ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಎಂಟು ಹಂತದಲ್ಲಿ ಮತದಾನ ನಡೆಯಲಿದೆ. ಮೇ ಎರಡರಂದು ಫಲಿತಾಂಶ ಹೊರಬೀಳಲಿದೆ.