ಚೆನ್ನೈ: ತಮಿಳುನಾಡಿನ ಹೊಸೂರು ಹಾಗೂ ಬೆಂಗಳೂರು ನಡುವೆ ಮೆಟ್ರೊ ರೈಲು ಸಂಪರ್ಕ ಒದಗಿಸುವ ಸಂಬಂಧ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಮುಂದಾಗಿರುವ ಚೆನ್ನೈ ಮೆಟ್ರೊ ರೈಲು ನಿಗಮ (ಸಿಎಂಆರ್ಎಲ್), ಒಪ್ಪಿಗೆ ನೀಡುವಂತೆ ಕೋರಿ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದೆ.
ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡು ಗಡಿಯಲ್ಲಿರುವ ಕೈಗಾರಿಕಾ ನಗರ ಹೊಸೂರು ನಡುವೆ ಮೆಟ್ರೊ ರೈಲು ಸಂಪರ್ಕ ಒದಗಿಸುವುದನ್ನು ಈ ಉದ್ದೇಶಿತ ಯೋಜನೆ ಒಳಗೊಂಡಿದೆ.
‘ಸಚಿವಾಲಯದಿಂದ ಒಪ್ಪಿಗೆ ದೊರೆತ ಕೂಡಲೇ ಕಾರ್ಯಸಾಧ್ಯತಾ ಅಧ್ಯಯನ ಆರಂಭಿಸಲಾಗುವುದು’ ಎಂದು ಸಿಎಂಆರ್ಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಎ.ಸಿದ್ದೀಕ್ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಈ ಅಧ್ಯಯನಕ್ಕಾಗಿ ತಮಿಳುನಾಡು ಸರ್ಕಾರವು ಸಿಎಂಆರ್ಎಲ್ಗೆ ₹ 75 ಲಕ್ಷ ಮಂಜೂರು ಮಾಡಿದೆ.
ಒಟ್ಟು 20.5 ಕಿ.ಮೀ. ಉದ್ದದ ಈ ಮಾರ್ಗದ ಪೈಕಿ 11.7 ಕಿ.ಮೀ. ಉದ್ದದಷ್ಟು ಮಾರ್ಗ ಕರ್ನಾಟಕದಲ್ಲಿ ಇರಲಿದೆ.
ಟಿವಿಎಸ್, ಅಶೋಕ್ ಲೇಲ್ಯಾಂಡ್, ಟೈಟನ್ ಸೇರಿದಂತೆ ಹಲವು ಬೃಹತ್ ಕೈಗಾರಿಕೆಗಳು ಹೊಸೂರಿನಲ್ಲಿವೆ. ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಉದ್ದಿಮೆಗಳು ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೂ (ಎಂಎಸ್ಎಂಇ) ಇಲ್ಲಿವೆ.
ಈ ಯೋಜನೆಗೆ ಕರ್ನಾಟಕ ಸರ್ಕಾರ ಕೂಡ ಸಮ್ಮತಿ ನೀಡಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಕಳೆದ ವರ್ಷ ಪತ್ರ ಬರೆದಿದೆ. ಬೆಂಗಳೂರು ಹಾಗೂ ಹೊಸೂರು ನಡುವೆ ನಿತ್ಯವೂ ಸಂಚರಿಸುವ ಸಾವಿರಾರು ಜನರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ವಿವರಿಸಿದೆ.