ಹೈದರಾಬಾದ್:ತಿರುಮಲದಲ್ಲಿನ ತಿರುಪತಿ ದೇವಸ್ಥಾನದ ಆವರಣದಲ್ಲಿ ತಲೆಎತ್ತಿರುವ ಎಲ್ಲ ಖಾಸಗಿ ಹೋಟೆಲ್ಗಳನ್ನು ತೆರವುಗೊಳಿಸಿ, ದೇಗುಲಕ್ಕೆ ಭೇಟಿ ನೀಡುವ ಎಲ್ಲರಿಗೂ ಏಕರೂಪದಲ್ಲಿ ಅನ್ನ ಪ್ರಸಾದವನ್ನು ವಿತರಿಸಲು ಆಡಳಿತ ಮಂಡಳಿಯು ಚಿಂತನೆ ನಡೆಸಿದೆ.
ಆಡಳಿತ ಮಂಡಳಿಯ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಅವರ ಪ್ರಕಾರ, ತಿರುಮಲ ಬೆಟ್ಟದಲ್ಲಿ ಎಲ್ಲ ಪ್ರಮುಖ, ಆಯಕಟ್ಟಿನ ಸ್ಥಳದಲ್ಲಿ ಅನ್ನ ಪ್ರಸಾದ ವಿತರಿಸುವ ಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ.
ತಿರುಮಲ ವೆಂಕಟೇಶ್ವರನ ದರ್ಶನಕ್ಕೆ ಬರುವ ಎಲ್ಲ ಭಕ್ತಾಧಿಗಳಿಗೆ ಏಕರೂಪದ ಆಹಾರ ಒದಗಿಸುವುದು ಇದರ ಗುರಿ ಎಂದು ಹೇಳಿದರು. ತಿರುಪತಿಯಲ್ಲಿ ಅನ್ನಪ್ರಸಾದ ಕೇಂದ್ರವನ್ನು ಪರಿಶೀಲಿಸಿದ ಅವರು, ಖಾಸಗಿ ಹೋಟೆಲ್ಗಳು ಹಣಬೆಯಂತೆ ವ್ಯಾಪಿಸಿರುವುದನ್ನು ಗಮನಿಸಿದರು.
ಸದ್ಯ ಶ್ರೀ ಮಾತೃಶ್ರೀ ತರಿಗೊಂಡ ವೆಂಗಮಾಂಬಾ ಅನ್ನ ಪ್ರಸಾದ ಕೇಂದ್ರ ಮತ್ತು ವೈಕುಂಟಂ ಸಾಲು ಬಳಿಯ ಕೇಂದ್ರದಲ್ಲಿ ದಿನವಿಡೀ ಉಚಿತ ಊಟ ಒದಗಿಸಲಾಗುತ್ತಿದೆ. ವೆಂಗಮಾಂಬಾ ಸಂಕೀರ್ಣವೊಂದರಲ್ಲಿಯೇ ನಿತ್ಯ ಸುಮಾರು 60,000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ.