ನವದೆಹಲಿ: ‘2022ರ ಅಂತ್ಯದ ವೇಳೆಗೆ ಭಾರತವು ಎರಡು ಮಾನವರಹಿತ ಬಾಹ್ಯಾಕಾಶ ಯಾನ ಯೋಜನೆಗಳನ್ನು ಹಮ್ಮಿಕೊಳ್ಳಲಿದೆ’ ಎಂದು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಗುರುವಾರ ಹೇಳಿದ್ದಾರೆ.
ಬಾಹ್ಯಾಕಾಶ ಯೋಜನೆಗಳ ಬಗ್ಗೆ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಅವರು, 2022ರ ವೇಳೆಗೆ ಶುಕ್ರಗ್ರಹದ ಬಳಿಗೆ ಹಾಗೂ 2022–23ರ ವೇಳೆಗೆ ಸೂರ್ಯನ ಕುರಿತು ಅಧ್ಯಯನ ನಡೆಸಲು ಬಾಹ್ಯಾಕಾಶ ನೌಕೆಗಳನ್ನು ಕಳುಹಿಸುವ ಯೋಜನೆಗಳನ್ನು ಹಮ್ಮಿಕೊಳ್ಳುವ ಚಿಂತನೆ ನಡೆಸಲಾಗಿದೆ ಎಂದಿದ್ದಾರೆ.
2030ರ ವೇಳೆಗೆ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಯೋಜನೆಗೂ ಚಿಂತನೆ ನಡೆಸಲಾಗಿದೆ ಎಂದೂ ಸಚಿವರು ತಿಳಿಸಿದರು.
ಕೋವಿಡ್ ಕಾರಣಗಳಿಂದ ಹಲವು ಬಾಹ್ಯಾಕಾಶ ಯೋಜನೆಗಳು ವಿಳಂಬವಾಗಿವೆ ಎಂದು ಹೇಳಿದ್ದಾರೆ.
ಮಾನವರಹಿತ ಬಾಹ್ಯಾಕಾಶ ಯಾನದಲ್ಲಿ ‘ವಾಯುಮಿತ್ರ’ ಹೆಸರಿನ ರೋಬಾಟ್ಗಳನ್ನು ಬಳಸಲಾಗುವುದು. ಇದರಿಂದ ‘ಗಗನಯಾನ’ ಯೋಜನೆಗೂ ಅನುಕೂಲವಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ.
ಭಾರತದ ‘ಗಗನಯಾನ’ ಯೋಜನೆಯು ಇತರ ದೇಶಗಳು ನಡೆಸಿರುವ ಮಾನವಸಹಿತ ಬಾಹ್ಯಾಕಾಶ ಯಾನಗಳಿಗಿಂತ ಭಿನ್ನವಾಗಿರಲಿದೆ ಮತ್ತು ಹೆಚ್ಚು ವೆಚ್ಚದಾಯಕವಾಗಿದೆ’ ಎಂದೂ ಸಚಿವರು ತಿಳಿಸಿದರು.