ಸುಲಿಗೆ ಪ್ರಕರಣ: ಭೂಗತ ಪಾತಕಿ ಛೋಟಾ ರಾಜನ್ಗೆ ಎರಡು ವರ್ಷ ಜೈಲು

ಮುಂಬೈ: ಸುಲಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಛೋಟಾ ರಾಜನ್ ಮತ್ತು ಆತನ ಮೂವರು ಸಹಚರರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಮುಂಬೈನ ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದೆ.
2015ರ ಅಕ್ಟೋಬರ್ನಲ್ಲಿ ಇಂಡೊನೇಷ್ಯಾದಲ್ಲಿ ಭಾರತದ ಅಧಿಕಾರಿಗಳು ರಾಜನ್ನನ್ನು ಬಂಧಿಸಿ, ಕರೆದುಕೊಂಡು ಬಂದಿದ್ದರು. ಆತನನ್ನು ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
75 ಅಪರಾಧಗಳ ಪೈಕಿ ‘ಟಾಡಾ’ದಡಿ ನಾಲ್ಕು, ‘ಪೊಟಾ’ದಡಿ ಒಂದು (ಭಯೋತ್ಪಾದನೆ ತಡೆ ಕಾಯ್ದೆ) ಮತ್ತು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ (ಮೊಕಾ) 20ಕ್ಕೂ ಹೆಚ್ಚು ಪ್ರಕರಣಗಳು ರಾಜನ್ ವಿರುದ್ಧ ದಾಖಲಾಗಿವೆ.
ವಿದೇಶದಲ್ಲಿದ್ದುಕೊಂಡೇ ಭೂಗತ ಲೋಕದ ವ್ಯವಹಾರ ನಿಯಂತ್ರಿಸುತ್ತಿದ್ದ ರಾಜನ್ಗೂ ಮತ್ತೊಬ್ಬ ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂಗೂ ಮುಂಬೈ ಭೂಗತ ಜಗತ್ತಿನ ಮೇಲೆ ಹಿಡಿತ ಸಾಧಿಸಲು ಪೈಪೋಟಿ ನಡೆದಿತ್ತು.
ಭೂಗತ ಲೋಕಕ್ಕೆ ಪ್ರವೇಶಿಸುವ ಮೊದಲು ರಾಜೇಂದ್ರ ನಿಕಲಾಜೆಯಾಗಿದ್ದ ರಾಜನ್, 1970ರಲ್ಲಿ ಚೇಂಬೂರ್ ಬಳಿಯ ಸಿನಿಮಾ ಮಂದಿರಗಳ ಮುಂದೆ ಬ್ಲ್ಯಾಕ್ ಟಿಕೆಟ್ ಮಾರಾಟ ಮಾಡುತ್ತಿದ್ದ. ಜತೆಗೆ ಸಣ್ಣಪುಟ್ಟ ಅಪರಾಧ ಕೃತ್ಯಗಳ ಜತೆಗೆ ಕಳ್ಳಬಟ್ಟಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ. ದಾವೂದ್ ಗ್ಯಾಂಗ್ (ಡಿ–ಗ್ಯಾಂಗ್) ಸೇರಿಕೊಂಡ ನಂತರ ‘ಛೋಟಾ ರಾಜನ್’ ಎಂದು ಕುಖ್ಯಾತನಾದ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.