ನವದೆಹಲಿ : ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಎರಡು ಲಕ್ಷ ಹೊಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪಿಎಸಿಎಸ್) ಮತ್ತು ಡೇರಿ– ಮೀನುಗಾರಿಕಾ ಸಹಕಾರ ಸಂಘಗಳನ್ನು ತೆರೆಯಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಇಲ್ಲಿಯವರೆಗೆ ಸಹಕಾರ ಸಂಘಗಳು ತೆರೆಯದ ಗ್ರಾಮಗಳು ಮತ್ತು ಪಂಚಾಯ್ತಿಗಳಲ್ಲಿ ಇವುಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಿಷ್ಠಗೊಳಿಸುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ.
ದೇಶದಲ್ಲಿ ಒಟ್ಟು 99,000 ಪಿಎಸಿ ಎಸ್ಗಳಿದ್ದು, ಅವುಗಳಲ್ಲಿ 63,000 ಕ್ರಿಯಾಶೀಲವಾಗಿವೆ. ಉಳಿದಂತೆ ದೇಶದ 1.6 ಲಕ್ಷ ಪಂಚಾಯ್ತಿಗಳಲ್ಲಿ ಪಿಎಸಿಎಸ್ಗಳಿಲ್ಲ. ಹಾಗೆಯೇ ಸುಮಾರು 2 ಲಕ್ಷ ಪಂಚಾಯ್ತಿಗಳಲ್ಲಿ ಯಾವುದೇ ಡೇರಿ ಸಹಕಾರ ಸಂಘಗಳಿಲ್ಲ.
ದೇಶದಲ್ಲಿ ಸಹಕಾರಿ ಆಂದೋಲನ ವನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಸಂಪುಟ ಈ ಯೋಜನೆಗೆ ಅನುಮೋದನೆ ನೀಡಿದೆ.
‘ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಬಾರ್ಡ್, ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ (ಎನ್ಡಿಡಿಬಿ) ಮತ್ತು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್ಎಫ್ಡಿಬಿ) ಕ್ರಿಯಾ ಯೋಜನೆ ಸಿದ್ಧ ಪಡಿಸಲಿದೆ’ ಎಂದು ಪ್ರಕಟಣೆ ತಿಳಿಸಿದೆ.