ಲಖನೌ: ಪತಿ, ಎರಡನೇ ಪತ್ನಿ ಜೊತೆ ಸೇರಿ ಏಳು ತಿಂಗಳ ತನ್ನ ಮಗುವನ್ನು ಕೊಂದು ಹೊಲದಲ್ಲಿ ಹೂತು ಹಾಕಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೋಟಾರ್ ಮೆಕ್ಯಾನಿಕ್ ಸಂಜಯ್ ಮತ್ತು ಅವರ ಎರಡನೇ ಪತ್ನಿ ಮೀನಾ ಅವರನ್ನು ಬುಧವಾರ ಸಂಜೆ ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ತಲೆಗೆ ಗಾಯ ಮತ್ತು ಎಡಗೈ ಮುರಿದಿರುವುದು ಕಂಡು ಬಂದಿದೆ.
ಎರಡನೇ ಪತ್ನಿ ಮೀನಾ ಅವರ ಒತ್ತಾಯದ ಮೇರೆಗೆ ತನ್ನ ಮಾಜಿ ಪತಿ ಸಂಜಯ್ ಮಗುವನ್ನು ಕೊಂದಿದ್ದಾನೆ ಎಂದು ಬಾಲಕಿಯ ತಾಯಿ ಮತ್ತು ಸಂಜಯ್ ಮೊದಲ ಪತ್ನಿ ಪ್ರಮೀಳಾ ಹೇಳಿರುವುದಾಗಿ ಎಫ್ಐಆರ್ನಲ್ಲಿ ದಾಖಲಾಗಿದೆ.
ಒಂಬತ್ತು ವರ್ಷಗಳ ಹಿಂದೆ ಪ್ರಮೀಳಾ ಮತ್ತು ಸಂಜಯ್ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಕೆಲವು ತಿಂಗಳ ಹಿಂದೆ ದಂಪತಿ ಬೇರ್ಪಟ್ಟಿದ್ದರು. ಹೀಗಾಗಿ, ಪ್ರಮೀಳಾ ಇಬ್ಬರು ಹೆಣ್ಣುಮಕ್ಕಳೊಂದಿಗೆ ಕಾಕೋರಿಯಲ್ಲಿರುವ ತನ್ನ ತಾಯಿಯ ಮನೆಗೆ ಬಂದಿದ್ದರು.
ಇತ್ತೀಚೆಗಷ್ಟೇ ಸಂಜಯ್, ಮೀನಾ ಅವರನ್ನು ಮದುವೆಯಾಗಿದ್ದ. ಆದರೆ, ಜುಲೈ 21 ರಂದು ಪ್ರಮೀಳಾ ಮನೆಗೆ ಬಂದು ಇಬ್ಬರೂ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿದ್ದ ಎಂದು ತಿಳಿದು ಬಂದಿದೆ.
ನಾಲ್ಕು ದಿನಗಳ ನಂತರ, ಪ್ರಮೀಳಾ ತನ್ನ ಹೆಣ್ಣುಮಕ್ಕಳನ್ನು ಭೇಟಿಯಾಗಲು ಬಂದಾಗ ಕಿರಿಯ ಮಗಳು ಕಾಣೆಯಾಗಿರುವುದು ಕಂಡುಬಂದಿದೆ. ಪತಿ ಸಂಜಯ್ನಿಂದ ಸೂಕ್ತ ಉತ್ತರ ಸಿಗಲಿಲ್ಲ.ನೆರೆಹೊರೆಯವರನ್ನು ವಿಚಾರಿಸಿದಾಗ ಹಿಂದಿನ ದಿನ ಸಂಜಯ್ ಹೊಲದಲ್ಲಿ ಏನೊ ಮಾಡುತ್ತಿದ್ದನ್ನು ನೋಡಿರುವುದಾಗಿ ಹೇಳಿದ್ದರು.
ನಂತರ ಪ್ರಮೀಳಾ ಪೊಲೀಸರಿಗೆ ದೂರು ನೀಡಿದ್ದರು. ತನಿಖೆಯಲ್ಲಿ ಹೆತ್ತ ತಂದೆಯೇ ಎರಡನೇ ಪತ್ನಿ ಜೊತೆ ಸೇರಿ ಮಗಳನ್ನು ಕೊಂದಿರುವುದು ಬೆಳಕಿಗೆ ಬಂದಿದೆ.