ಫಿರೋಜಾಬಾದ್: ಉತ್ತರ ಪ್ರದೇಶ ಚುನಾವಣೆಗೆ ಮನೆ–ಮನೆ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಫಿರೋಜಾಬಾದ್ನಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರು ಆರತಿ ಬೆಳಗಿದ್ದಾರೆ.
ಫಿರೋಜಾಬಾದ್ನಲ್ಲಿ ಫೆಬ್ರುವರಿ 20ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.
ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರೂ ಹೂಮಳೆಗರೆಯುವ ಮೂಲಕ ನಡ್ಡಾಗೆ ಸ್ವಾಗತ ಕೋರಿದ್ದಾರೆ.
‘ನಡ್ಡಾ ಅವರು ಮನೆಯಿಂದ ಮನೆಗೆ ತೆರಳಿ ಪ್ರಚಾರ ನಡೆಸುತ್ತಿರುವಾಗ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು ಹೂಮಳೆಗರೆದು ಸ್ವಾಗತಿಸಿದರೆ ಮುಸ್ಲಿಂ ಮಹಿಳೆಯರು ಆರತಿ ಬೆಳಗಿದರು’ ಎಂದು ಬಿಜೆಪಿಯ ನಗರ ಘಟಕದ ಅಧ್ಯಕ್ಷ ರಾಕೇಶ್ ಶಂಖ್ವಾರ್ ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರು ದೇಶದ ಜನರ ಜತೆ ನೇರ ಸಂವಹನ ಸಾಧಿಸುತ್ತಿರುವ ಮೊದಲ ಪ್ರಧಾನಿಯಾಗಿದ್ದಾರೆ. ಜನಸಾಮಾನ್ಯರೊಂದಿಗೆ ಬಾಂಧವ್ಯ ಸಾಧಿಸುವ ಅವರ ಸಾಮರ್ಥ್ಯದ ಬಗ್ಗೆ ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ ಎಂದು ಜನರ ಜತೆ ಸಂವಾದ ನಡೆಸುತ್ತಿರುವಾಗ ನಡ್ಡಾ ಹೇಳಿದ್ದಾರೆ.
‘ಮನ್ ಕೀ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಯಾವಾಗಲೂ ಬಡವರು ಹಾಗೂ ಅಸಹಾಯಕರ ಜತೆ ಮಾತುಕತೆ ನಡೆಸುತ್ತಾರೆ. ಮಹಿಳೆಯರು, ಎಸ್ಸಿ, ಎಸ್ಟಿ ಜನರ ಜತೆಗೂ ಸಂವಹನ ನಡೆಸುವುದಲ್ಲದೆ ಅವರ ಸ್ಥಿತಿಯನ್ನು ಸುಧಾರಿಸಲೂ ಕ್ರಮ ಕೈಗೊಳ್ಳುತ್ತಾರೆ ಎಂದು ನಡ್ಡಾ ಹೇಳಿದ್ದಾರೆ.
ಬಿಜೆಪಿಯ ಶಿಕೋಹಾಬಾದ್ ಕ್ಷೇತ್ರದ ಅಭ್ಯರ್ಥಿ ಓಂ ಪ್ರಕಾಶ್ ವರ್ಮಾ ಪರ ನಡ್ಡಾ ಫಿರೋಜಾಬಾದ್ನಲ್ಲಿ ಪ್ರಚಾರ ನಡೆಸಿದ್ದಾರೆ. ಓಂ ಪ್ರಕಾಶ್ ವರ್ಮಾ ಸಮಾಜವಾದಿ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದರು.