ಮುಂಬೈ: ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ನಡೆದ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ತ್ರಿವರ್ಣ ಧ್ವಜಕ್ಕೆ ಅವಮಾನವಾಗುವಂತಹ ಘಟನೆ ನಡೆದಿಲ್ಲ. ಕೆಂಪುಕೋಟೆಯಲ್ಲಿ ಅಂದು ನಡೆದ ಘಟನೆಗಳ ಸೆರೆಹಿಡಿದಿರುವ ವಿಡಿಯೊದಲ್ಲಿ ಇಂತಹ ಯಾವುದೇ ದೃಶ್ಯ ಇಲ್ಲ ಎಂದು ಶಿವಸೇನಾ ಹೇಳಿದೆ.
‘ನಡೆಯದ ಘಟನೆಯನ್ನು ವರ್ಣಿಸುವುದು, ಆ ವಿಷಯದ ಕುರಿತಾಗಿ ಹುಯಿಲೆಬ್ಬಿಸುವುದು ಕೂಡ ಒಂದು ರೀತಿಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಹಾಗೆ’ ಎಂದು ಶಿವಸೇನಾ ಪಕ್ಷದ ಮುಖವಾಣಿಯಾಗಿರುವ ʼಸಾಮ್ನಾʼ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.
‘ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನವಾಗುವಂತಹ ಯಾವುದೇ ದೃಶ್ಯಾವಳಿ ಇರಲಿಲ್ಲ. ಈಗಲೂ ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜ ಹೆಮ್ಮೆಯಿಂದ ಹಾರುತ್ತಿದೆ. ರಾಷ್ಟ್ರಧ್ವಜದ ಗೌರವ, ದೇಶದ ಗೌರವ’ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.
‘ಜನವರಿ 26 ರ ಹಿಂಸಾಚಾರವನ್ನು ರಾಜಕೀಯವಾಗಿ ಬಳಸುತ್ತಿರುವುದು ಸರಿಯೇ? ನಡೆಯದ ಘಟನೆ ಬಗ್ಗೆ ಪ್ರಧಾನಿ ಮೋದಿ ಅವರು ಯಾಕೆ ನೊಂದುಕೊಳ್ಳಬೇಕು? ಆಡಳಿತ ಪಕ್ಷವಾದ ಬಿಜೆಪಿ ಆ ವಿಷಯದ ಬಗ್ಗೆ ಯಾಕೆ ಹುಯಿಲೆಬ್ಬಿಸಬೇಕು?’ ಎಂದು ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ.
ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರದ ಬಗ್ಗೆಭಾನುವಾರ ಮೋದಿ ಅವರು, ‘ಗಣರಾಜ್ಯೋತ್ಸವ ದಿನದಂದು ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಲಾಗಿದೆ. ಇದು ದೇಶದ ಜನರಿಗೆ ಬಹಳ ನೋವನ್ನು ನೀಡಿದೆ’ ಎಂದು ಹೇಳಿದ್ದರು.