ಲಖನೌ: ಕೊಲೆ, ಸುಲಿಗೆ ದರೋಡೆ ಸೇರಿದಂತೆ 82 ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯೊಬ್ಬನನ್ನು ಉತ್ತರ ಪ್ರದೇಶದ ಪೊಲೀಸರು ಬುಧವಾರ ನಡೆಸಿದ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ.
ಲಾಲು ಯಾದವ್ ಅಲಿಯಾಸ್ ವಿನೋದ್ ಯಾದವ್ ಮೃತಪಟ್ಟ ಆರೋಪಿ. ಈತನನ್ನು ಹಿಡಿದುಕೊಟ್ಟವರಿಗೆ ₹1 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿತ್ತು.
ಮಾವೊ ಜಿಲ್ಲೆಯ ಭಾನ್ವಾರ್ಪುರ ಸಮೀಪದ ಸರಾಯಿ ಲಖನ್ಸಿ ಪ್ರದೇಶದಲ್ಲಿ ಮುಂಜಾನೆ 3.30ರ ಸಮಯದಲ್ಲಿ ತನ್ನನ್ನು ಸುತ್ತುವರಿದ ಪೊಲೀಸರ ವಿರುದ್ಧ ಲಾಲು ಗುಂಡು ಹಾರಿಸಿದ್ದಾನೆ. ನಂತರ ಲಾಲು ಯಾದವ್ ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಲಾಲುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೇ ಆತ ಮೃತಪಟ್ಟಿದ್ದಾನೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ಆರೋಪಿ ಬಳಸುತ್ತಿದ್ದ ಪಿಸ್ತೂಲ್, ಬುಲೆಟ್ ಕಾಟ್ರಿಡ್ಜ್ಗಳು ಮತ್ತು ಮೋಟಾರ್ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾವೊ ಜಿಲ್ಲೆಯ ಆರ್ಟಿಐ ಕಾರ್ಯಕರ್ತ ಬಾಲ್ಗೋವಿಂದ್ ಸಿಂಗ್ ಕೊಲೆ ಪ್ರಕರಣ ಸೇರಿದಂತೆ 82 ಕ್ರಿಮಿನಲ್ ಪ್ರಕರಣಗಳು ಲಾಲು ವಿರುದ್ಧ ದಾಖಲಾಗಿದ್ದವು. ಜೌನ್ಪುರದಲ್ಲಿ ನಡೆದ ₹2 ಕೋಟಿ ದರೋಡೆ ಪಕ್ರರಣ, ಭದ್ರತಾ ಸಿಬ್ಬಂದಿಯನ್ನು ಕೊಂದು ₹25 ಲಕ್ಷ ದೋಚಿದ ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿತ್ತು.